ಮೈಸೂರು : ರಾಜ್ಯದಲ್ಲಿ ಅತಿವೃಷ್ಠಿಯಿಂದಾಗಿ ೧೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ನಷ್ಟಕ್ಕೀಡಾಗಿದ್ದು, ಬೆಳೆ ನಷ್ಟದ ಕುರಿತು ನಡೆಯುತ್ತಿರುವ ಸಮೀಕ್ಷೆ ಮುಗಿದ ಬಳಿಕ ರೈತರಿಗೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಜಲಾಶಯಗಳು, ಕೆರೆ ಕಟ್ಟೆಗಳು ತುಂಬಿವೆ. ಬೆಳೆಗಳೂ ಚೆನ್ನಾಗಿ ಬಂದಿವೆ. ಆದರೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿಯಿಂದಾಗಿ ಬೆಳೆ ನಷ್ಟ ಸಂಭವಿಸಿದೆ. ಮೈಸೂರು ಭಾಗದಲ್ಲಿ ಬೆಳೆ ನಷ್ಟ ಕಡಿಮೆಯಿದೆ.
ಇದನ್ನು ಓದಿ : ಜಾತಿಗಣತಿ ಸಮೀಕ್ಷೆ ಮೂಲಕ ಗ್ಯಾರಂಟಿ ಬಂದ್ ಮಾಡುವ ಸಂಚು: ಆರ್.ಅಶೋಕ್ ಆರೋಪ
ಒಟ್ಟಾರೆಯಾಗಿ ರಾಜ್ಯದಲ್ಲಿ ಅತಿವೃಷ್ಠಿಯಿಂದಾಗಿ ೧೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಷ್ಟವಾಗಿದೆ. ಇದರ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದ್ದು, ಈಗಾಗಲೇ ನಾನು ಕಲಬುರಗಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದೇನೆ. ಆದರೆ ಪೂರ್ಣವಾಗಿ ಸಮೀಕ್ಷೆ ಮಾಡಲು ಆಗಿಲ್ಲ. ಮಳೆ ಬರುತ್ತಿರುವುದರಿಂದ ಸಮೀಕ್ಷೆಗೆ ಅಡ್ಡಿಯಾಗುತ್ತಿದೆ. ಸಮೀಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಖುಷ್ಕಿ ಜಮೀನಿಗೆ ಹೆಕ್ಟೇರ್ಗೆ ೧೭ ಸಾವಿರ ರೂ., ನೀರಾವರಿ ಪ್ರದೇಶಕ್ಕೆ ಹೆಕ್ಟೇರ್ಗೆ ೧೭,೫೦೦ ರೂ., ಬಹುಬೆಳೆ ನಷ್ಟವಾಗಿರುವ ಪ್ರದೇಶದಲ್ಲಿ ಹೆಕ್ಟೇರ್ಗೆ ೩೧ ಸಾವಿರ ರೂ.ಗಳನ್ನು ರೈತರಿಗೆ ಪರಿಹಾರವಾಗಿ ನೀಡಲಾಗುವುದು ಎಂದು ಹೇಳಿದರು. ಹಳೇ ಮೈಸೂರು ಭಾಗದಲ್ಲಿ ಅಷ್ಟೇನೂ ಬೆಳೆ ನಷ್ಟವಾಗಿಲ್ಲ ಎಂದು ಹೇಳಿದರು.





