Mysore
15
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

ಸತತ ಮಳೆ : ಕುಸಿದು ಬಿದ್ದ ಶಾಲಾ ಕಾಂಪೌಂಡ್‌

ಹುಣಸೂರು : ತಾಲ್ಲೂಕಿನ ಗಾವಡಗೆರೆ ಹೋಬಳಿ ಯಾದ್ಯಂತ ಗುರುವಾರ ರಾತ್ರಿ ನಿರಂತರವಾಗಿ ಸುರಿದ ಮಳೆಯಿಂದ ಹಲವಾರು ಅವಘಡಗಳು ಸಂಭವಿಸಿವೆ.

ಹಿರೀಕ್ಯಾತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಕುಸಿದು ಬಿದ್ದಿದೆ. ಇನ್ನು ಹಿರೀಕ್ಯಾತನಹಳ್ಳಿ ಗ್ರಾಮದ ಪುಟ್ಟೇಗೌಡರ ವಾಸದ ಮನೆಯ ಕೊಠಡಿಯ ಗೋಡೆ ಉರುಳಿದೆ. ರಾಮೇನಹಳ್ಳಿ ಗ್ರಾಮದಲ್ಲಿ ತೊಟ್ಟಿ ಮನೆ ಕುಸಿದು ಬಿದ್ದರೆ, ಹಾರಂಗಿ ಬಲದಂಡೆಯ ೧೫ನೇ ಉಪಕಾಲುವೆ ಹೆಚ್ಚಿದ ನೀರಿನಿಂದಾಗಿ ಕಾಲುವೆ ಒಡೆದು ಹರೀಶ್ ಮತ್ತು ಅಭಿಷೇಕ್ ಎಂಬವರ ಮೆಣಸಿನಕಾಯಿ ಹಾಗೂ ಜೋಳದ ಬೆಳೆಗಳು ಕೊಚ್ಚಿ ಹೋಗಿವೆ. ಹಿರೀಕ್ಯಾತನಹಳ್ಳಿ ಗ್ರಾಮದ ಜಯಮ್ಮ ಎಂಬವರಿಗೆ ಸೇರಿದ ದಪ್ಪ ಮೆಣಸಿನಕಾಯಿ ಬೆಳೆಗೆ ವಿಪರೀತ ನೀರು ನುಗ್ಗಿ ಸಸಿಗಳಿಗೆ ಹಾನಿಯಾಗಿದೆ.

ಇದನ್ನೂ ಓದಿ:-ಹಂಪನಾ ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ : ಸಿ.ಎಂ.ಸಿದ್ದರಾಮಯ್ಯ

ಹರವೆ ಗ್ರಾಮದಲ್ಲಿ ಚಿಕ್ಕಕೆರೆ ನೀರು ಕೋಡಿ ಬಿದ್ದ ರಭಸಕ್ಕೆ ಭತ್ತದ ಫಸಲು ನೀರಿನಿಂದ ಆವೃತವಾಗಿದೆ. ಮರೂರು ಗ್ರಾಮದ ಸಮೀಪ ಭತ್ತದ ಗದ್ದೆಗೆ ಅಪಾರ ನೀರು ಹರಿದು ಬೆಳೆಗೆ ಹಾನಿಯಾಗಿದೆ. ಮರೂರು ಗ್ರಾಮದ ಕೆರೆ ಕೋಡಿ ಬಿದ್ದ ನೀರಿನಲ್ಲಿ ಮೀನು ಹಿಡಿಯಲು ಮುಂದಾದರು.

ಹರವೆಯಿಂದ ಕಲ್ಲಹಳ್ಳಿ ರಾಮೇನಹಳ್ಳಿ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಗೆ ಚರಂಡಿಯಲ್ಲಿ ಮಳೆ ನೀರು ಹೆಚ್ಚಾಗಿದ್ದರಿಂದ ಹಾನಿಯಾಗಿದ್ದು, ಅಕ್ಕಪಕ್ಕದ ಮನೆಗಳಿಗೂ ನೀರು ನುಗ್ಗಿದೆ.

೩ ತಿಂಗಳುಗಳಿಂದ ಮಳೆ ಬಾರದಿದ್ದರಿಂದ ರೈತರು ಕಂಗಾಲಾಗಿದ್ದರು. ಇದೀಗ ೨ ದಿನಗಳಿಂದ ಸುರಿದ ಭಾರಿ ಮಳೆಯಿಂದ ರೈತರು ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

Tags:
error: Content is protected !!