Mysore
31
overcast clouds

Social Media

ಸೋಮವಾರ, 22 ಜೂನ್ 2026
Light
Dark

ಸಂವಿಧಾನ ತಜ್ಞ ಡಾ. ಸಿಕೆಎನ್‌ ರಾಜ ನಿಧನ

ಮೈಸೂರು: ಹಿರಿಯ ಸಂವಿಧಾನ ತಜ್ಞ, ಲೇಖಕ ಡಾ. ಸಿ.ಕೆ.ಎನ್‌ ರಾಜ ಮೈಸೂರಿನಲ್ಲಿ ಬುಧವಾರ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಕಾನೂನು ತಜ್ಞರಾಗಿ, ನ್ಯಾಯವಾದಿಯಾಗಿ, ಲೇಖಕರಾಗಿ ಹೆಸರು ಮಾಡಿದ ಡಾ. ರಾಜ ಅವರ ಹುಟ್ಟೂರು ನಂಜನಗೂಡು. 1932 ಫೆಬ್ರುವರಿ 19ರಂದು ನಂಜನಗೂಡಿನಲ್ಲಿ ಸಿ.ಕೆ. ನಾಗಪ್ಪ-, ಸೀತಾ ಲಕ್ಷ್ಮಮ್ಮ ದಂಪತಿ ಪುತ್ರನಾಗಿ ಜನಿಸಿದ ಅವರು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಪದವಿ ಪಡೆದು ಮೈಸೂರು ವಿವಿ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು.

ಬಳಿಕ ವಕೀಲಿ ವೃತ್ತಿ ಆರಂಭಿಸಿದ ಅವರು ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ರೀಡರ್ ಆಗಿ ಕಾರ್ಯನಿರ್ವಹಿಸಿದ್ದರು. ಮಹಾಜನ್‌ ಕಾನೂನು ಕಾಲೇಜಿನ ಪ್ರಾಂಶುಪಾಲರು, ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ತಮ್ಮ ಇಳಿ ವಯಸ್ಸಿನಲ್ಲೂ ಅವರು ಕಾನೂನು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.

ಕಾನೂನು ಮತ್ತು ಸಂವಿಧಾನಕ್ಕೆ ಸಂಬಂಧಿಸಿ ಅನೇಕ ಪುಸ್ತಕಗಳನ್ನು ಬರೆದಿರುವ ಡಾ. ರಾಜ ಅವರು ಬೇರೆ ಬೇರೆ ಪತ್ರಿಕೆಗಳಿಗೆ ಕಾನೂನು ಸಂಬಂಧಿ ಲೇಖನಗಳನ್ನು ಬರೆಯುತ್ತಿದ್ದರು. ಧಾರಾವಾಹಿ ರೂಪದಲ್ಲಿ ಕಾದಂಬರಿಗಳನ್ನೂ ಬರೆದಿದ್ದಾರೆ. ಹಾಸ್ಯ ಸಾಹಿತ್ಯ ಬರವಣಿಗೆಯಲ್ಲೂ ಇವರು ಖ್ಯಾತರಾಗಿದ್ದರು. ಕಾನೂನು ಮತ್ತು ಸಂಸ್ಕೃತಿ, ಪಂಡಿತ್ಜೀಗೆ ಸೈನೋಸೈಟಿಸ್, ಪುನರುತ್ಥಾನ, ಹಾಗೂ ರಾಯರ ವಠಾರ ಇವರ ಪ್ರಮುಖ ಕೃತಿಗಳು.

ಖ್ಯಾತ ಕಾನೂನುತಜ್ಞ ಬೆಂಜಮಿನ್ ಎನ್. ಕಾರ್ಡೋಜೊ ಅವರು ರಚಿಸಿದ “ದ ನೇಚರ್ ಆಫ್ ದ ಜುಡಿಷಿಯಲ್ ಪ್ರೊಸೆಸ್ʼ ಎಂಬ ಕೃತಿಯನ್ನು ರಾಜ ಅವರು “ನ್ಯಾಯಿಕ ಪ್ರಕ್ರಿಯೆಯ ಸ್ವರೂಪ ʼ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!