Mysore
21
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹಾಡು ಪಾಡು ರಾಮಸ್ವಾಮಿ ನಿಧನಕ್ಕೆ ಸಿಎಂ ಸಂತಾಪ

ಮೈಸೂರು : ‘ಹಾಡುಪಾಡು ರಾಮು’ ಎಂದೇ ಖ್ಯಾತಿಯಾಗಿದ್ದ ಹಿರಿಯ ಪತ್ರಕರ್ತ ಟಿ.ಎಸ್.ರಾಮಸ್ವಾಮಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯನವರು ರಾಮೂ ಎಂದೇ ಜನಪ್ರಿಯರಾಗಿದ್ದ ಪತ್ರಕರ್ತ ಮತ್ತು ಕವಿ ಟಿ.ಎಸ್.ರಾಮಸ್ವಾಮಿ ಅವರ ಅನಿರೀಕ್ಷಿತ ಸಾವು ನನ್ನನ್ನು ಆಘಾತಕ್ಕೀಡು ಮಾಡಿದೆ. ಮೈಸೂರಿನ ಸಾಹಿತ್ಯ, ಸಾಂಸ್ಕೃತಿಕ ಮತ್ತು ಮಾಧ್ಯಮ ಕ್ಷೇತ್ರ ರಾಮು ಅವರ ಅಗಲಿಕೆಯಿಂದ ಬಡವಾಗಿದೆ.ಹಲವಾರು ಬರಹಗಾರರು ಮತ್ತು ಪತ್ರಕರ್ತರನ್ನು ಸಲಹಿ ಬೆಳೆಸಿದ್ದ ರಾಮು ನನಗೂ ಆತ್ಮೀಯ ಸ್ನೇಹಿತರಾಗಿದ್ದರು.ರಾಮು ಅವರ ಸಾವಿನಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಗೆಳೆಯರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಎಂದಿದ್ದಾರೆ.

ಎಳೆಯರ ಪಾಲಿನ ಪ್ರೀತಿಯ ಮಾಮ, ಬಲ್ಲಿದರಿಗೆ ವಿಮರ್ಶಕ ರಾಮ : 1953 ಸೆಪ್ಟೆಂಬರ್ 14, ಎಳೆಯ ವಯಸ್ಸಿನಲ್ಲಿ ಮಾರ್ಕ್ಸ್ ವಾದ, ಗಾಂಧಿ ವಿಚಾರಧಾರೆಗಳಿಂದ ಪ್ರಭಾವಿತ, ಆನೇಕ ಪ್ರಗತಿಪರ ಚಳವಳಿಗಳಲ್ಲಿ ತೆರೆಮರೆಯಲ್ಲಿಯೇ ಕೆಲಸ ಮಾಡಿದ ಟಿ.ಎಸ್‌. ರಾಮಸ್ವಾಮಿ ‘ರಾಮು’ ಎಂದೇ ಪರಿಚಿತ, ಜಾತಿವಿನಾಶ, ಸಮಾನತೆ, ಸಹಬಾಳ್ವೆ ಇತ್ಯಾದಿ ಸುಧಾರಣೆ ಮಂತ್ರವನ್ನು ತನ್ನಿಂದ ತನ್ನ ಮನೆಯಿಂದಲೇ ಅನುಷ್ಠಾನಕ್ಕೆ ತಂದವರು, ಆ ಕಾರಣಕ್ಕೆ ಮೈಸೂರಿನ ಸರಸ್ವತಿಪುರಂ 7ನೇ ಮೇನ್‌ನ ‘ಸಿ.ಎಚ್ 73 ಅಕ್ಷರಶಃ ಮಹಾಮನೆ, ಪುಣೆ ವಿಶ್ವವಿದ್ಯಾನಿಲಯದಿಂದ ಭಾಷಾ ವಿಜ್ಞಾನದಲ್ಲಿ ಮೈಸೂರು ವಿವಿಯಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾಮು, ತಮ್ಮ ಜ್ಞಾನಾರ್ಜನೆಯ ದಾಹವನ್ನು ಡಬಲ್ ಡಿಗ್ರಿಗಷ್ಟೇ ಸೀಮಿತಗೊಳಿಸಿಕೊಂಡವರಲ್ಲ. ಔಪಚಾರಿಕ ಶಿಕ್ಷಣದಾಚೆಗಿನ ಅವರ ಓದಿನ ಹರವು ವಿಶಾಲವಾದದ್ದು.

ಬೆನ್ನುಹತ್ತಿದ ಆನಾರೋಗ್ಯವನ್ನು ಇಚ್ಛಾಶಕ್ತಿಯ ಬಲದಿಂದಲೇ ಹಿಮ್ಮೆಟ್ಟಿಸಿದ ರಾಮು, ಸದಾ ಅಧ್ಯಯನಶೀಲರು ಹೊರಗಿನ ಜ್ಞಾನವನ್ನು ಅಂತರ್ಜಾಲದ ಕಿಟಕಿಯ ಮೂಲಕ ಸದಾ ಜಾಲಾಡುತ್ತಲೇ ಇರುತ್ತಿದ್ದರು. ಉತ್ಕೃಷ್ಟವಾದುದನ್ನು ತಮ್ಮ ಜ್ಞಾನ ಖಜಾನೆಗೆ ಸೇರಿಸಿಕೊಳ್ಳುತ್ತಿದ್ದರು. ಎಲ್ಲಿಯೂ ಜ್ಞಾನಪ್ರದರ್ಶನಕ್ಕಿಳಿಯದೆ ಎಳೆಯರೊಂದಿಗೆ ಎಳೆಯರಾಗಿಯೇ ಇರಲಿಚ್ಛಿಸುತ್ತಿದ್ದ ರಾಮು, ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳ ಉತ್ತಮ ಸಾಹಿತ್ಯ ಕೃತಿಗಳ ಬಗ್ಗೆ ವಿದ್ವತ್‌ ಪೂರ್ಣವಾಗಿ ಅತ್ಯಂತ ವಿನಯದಿಂದಲೇ ಚರ್ಚಿಸಬಲ್ಲವರಾಗಿದ್ದರು, ಮಾನವಶಾಸ್ತ್ರ ಪುರಾತತ್ವ, ಇತಿಹಾಸ, ಪುರಾಣ, ವಿಜ್ಞಾನ, ವಿಷಯಗಳು ಅವರ ಜ್ಞಾನಶಾಖೆಯಿಂದ ಹೊರತಲ್ಲ.

ದೇವನೂರು ಮಹಾದೇವ ಅವರ ಆತ್ಮೀಯ ಒಡನಾಡಿ, ನಾಡಿನ ಅನೇಕ ಲೇಖಕರ, ಚಿಂತಕರ ಸಾಕ್ಷಿ ಪ್ರಜ್ಞೆಯಂತಿದ್ದ ರಾಮು, ನಡೆ-ನುಡಿ, ಸರಳ ಬದುಕಿನ ರೀತಿಯಿಂದಲೇ ಆನೇಕ ಯುವ ಮನಸ್ಸುಗಳನ್ನು ಪ್ರಭಾವಿಸಿದವರು. ಮೈಸೂರು ಕುಕ್ಕರಹಳ್ಳಿಯ ಯುವಜನರಿಗೆ ಗಾಂಧೀ – ಮಾರ್ಕ್ಸ್‌ನನ್ನು ಒಟ್ಟಿಗೆ ನೋಡುವಂತೆ ಕಲಿಸಿ, ಆ ಮೂಲಕ ಅವರ ಸಾಮಾಜಿಕ, ಬೌದ್ಧಿಕ ಏಳಿಗೆಗೆ ಕಾರಣರಾಗಿದ್ದವರು.

‘ಆಂದೋಲನ’ ದಿನಪತ್ರಿಕೆಯ ಸಾಪ್ತಾಹಿಕ ಪುರವಣಿ ‘ಹಾಡು ಪಾಡು’ವನ್ನು ಒಂದೂವರೆ ದಶಕಗಳ ಕಾಲ ಸಮರ್ಥವಾಗಿ ನಿರ್ವಹಿಸಿದ್ದ ರಾಮು, ಪುರವಣಿಗೆ ಆದರದ್ದೇ ಘನತೆಯನ್ನು ತಂದಿದ್ದರು. ಈ ಘನತೆಯಿಂದಲೇ ಅವರನ್ನು ‘ಹಾಡು ಪಾಡು ರಾಮಸ್ವಾಮಿ ಎಂದು ಓದುಗರು ಗುರುತಿಸುತ್ತಿದ್ದರು.

ಬರೆದದ್ದು ಅಪಾರವಾದರೂ ಪುಸ್ತಕವಾಗಿ ಪ್ರಕಟವಾಗಿದ್ದು ಒಂದೇ ಒಂದು ಕೃತಿ. ಅದೂ 15-20 ವರ್ಷಗಳ ಹಿಂದೆ ಗೆಳೆಯರೊಬ್ಬರು ಒತ್ತಾಯಪೂರ್ವಕವಾಗಿ ಪ್ರಕಟಿಸಿದ್ದ ‘ಅಗ್ನಿಸೂಕ್ತ’ ಕವನ ಸಂಕಲನ. ಹೆಸರು, ಪ್ರಚಾರ, ಪ್ರಶಸ್ತಿ, ಸನ್ಮಾನಗಳಿಂದ ಹರದಾರಿ ದೂರವಿದ್ದ, ಎಲೆ ಮರೆ ಕಾಯಿಯಂತೆ ಕಾಯಕತತ್ವ ನಿಷ್ಠ ರಾಮು ಅವರನ್ನು ಮಾಧ್ಯಮ ಅಕಾಡೆಮಿ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ