ಮೈಸೂರು : ಐಸ್ ಕ್ರೀಂ ಚಪ್ಪರಿಸುತ್ತಾ, ಗುಡ್ಡೆ ಹಾಕಿದ್ದ ಕಡಲೇಕಾಯಿಯನ್ನು ಬೊಗಸೆಯಲ್ಲಿ ತುಂಬಿಕೊಳ್ಳುತ್ತಾ, ಚಾಕೋಲೇಟನ್ನು ಜೇಬಿಗಿಳಿಸುತ್ತಾ, ಸೌತೇಕಾಯಿ ರುಚಿ ನೋಡುತ್ತಲೇ ಮಕ್ಕಳು ವಸ್ತುಪ್ರದರ್ಶನ ಆವರಣವನ್ನು ಸುತ್ತುಹಾಕಿದರು. ಹಾಡಿನ ಸದ್ದಿಗೆ ಹೆಜ್ಜೆ ಹಾಕಿ ನಲಿದರು.
ಇದರ ಜೊತೆಗೆ ಕಿತ್ತಳೆ, ಬಾಳೆಹಣ್ಣು, ಮಜ್ಜಿಗೆ ರುಚಿಯನ್ನು ಸವಿದ ಮಕ್ಕಳು, ಬಾತ್, ಮೊಸರನ್ನ ಸೇವಿಸಿ ಹೊಟ್ಟೆ ತುಂಬಿಸಿಕೊಂಡರು…, ಜೊತೆಗೆ ವಿವಿಧ ಆಟೋಟದಲ್ಲಿ ಪಾಲ್ಗೊಂಡು ನಕ್ಕು ನಲಿದುದ್ದಲ್ಲದೆ ಬಹುಮಾನವನ್ನೂ ಮನೆಗೆ ಕೊಂಡೊಯ್ದರು….ಇದು ಶುಕ್ರವಾರ ವಸ್ತುಪ್ರದರ್ಶನ ಆವರಣದಲ್ಲಿ ಕಂಡುಬಂದ ದೃಷ್ಯಾವಳಿಗಳು. ಇಷ್ಟು ವರ್ಷಗಳ ಕಾಲ ಮಕ್ಕಳ ದಿನಾಚರಣೆ ಅಂಗವಾಗಿ ವಸ್ತುಪ್ರದರ್ಶನ ಆವರಣಕ್ಕೆ ಉಚಿತ ಪ್ರವೇಶ ಮಾತ್ರವಿತ್ತು.
ಆದರೆ ಕಳೆದ ವರ್ಷದಿಂದ ಮಕ್ಕಳು ವಸ್ತು ಪ್ರದರ್ಶನ ಆವರಣದಲ್ಲಿ ಊಟ, ತಿಂಡಿ, ಆಟೋಟಗಳ ಸಮೇತ ಇಡೀ ದಿನ ಸಂತಸ, ಉಲ್ಲಾಸದಿಂದ ಕಾಲ ಕಳೆಯುವಂತೆ ಅಧ್ಯಕ್ಷ ಅಯೂಬ್ಖಾನ್ ಏರ್ಪಾಡು ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಿಲ್ಲಾಡಳಿತದೊಂದಿಗೆ ವಸ್ತುಪ್ರದರ್ಶನ ಪ್ರಾಧಿಕಾರ ಇಂತಹ ಒಂದು ಸುಂದರ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮೈಸೂರು ನಗರ ಹಾಗೂ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಸುಮಾರು ೩ ಸಾವಿರ ಮಕ್ಕಳನ್ನು ಆವರಣಕ್ಕೆ ಬರಮಾಡಿಕೊಳ್ಳಲಾಗಿತ್ತು.
ಇದನ್ನು ಓದಿ: GRS ಯಂತ್ರದಲ್ಲಿ ಲೋಪ ; ವ್ಯಕ್ತಿಯೊಬ್ಬರ ಎರಡು ಬೆರಳು ಕಟ್ : ಎಫ್ಐಆರ್ ದಾಖಲು
ಬೆಳಿಗ್ಗೆ ೧೦ ಗಂಟೆಗೆ ಮಕ್ಕಳಿಗಾಗಿ ವಸ್ತು ಪ್ರದರ್ಶನ ಆವರಣವನ್ನು ಮುಕ್ತಗೊಳಿಸಲಾಗಿತ್ತು. ವಿವಿಧ ಶಾಲೆಗಳಿಗೆ ಮೊದಲೇ ಮಾಹಿತಿ ನೀಡಿದ್ದರ ಪರಿಣಾಮ ೧೨ ಗಂಟೆ ನಂತರ ಮಕ್ಕಳಿ ಸಾಗರೋಪಾದಿಯಲ್ಲಿ ವಸ್ತುಪ್ರದರ್ಶನ ಆವರಣಕ್ಕೆ ಲಗ್ಗೆ ಇಟ್ಟರು.
ರಂಗಾಯಣದ ಮಾಜಿ ನಿರ್ದೇಶಕ ಪ್ರಸನ್ನ ಹೆಗ್ಗೋಡು ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮೈಮ್ ರಮೇಶ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ರಘುರಾಜೇ ಅರಸ್ ಅವರ ಹಾಜರಿಯಲ್ಲಿ ಕೇವಲ ೧೦ ನಿಮಿಷಗಳಲ್ಲಿ ವೇದಿಕೆ ಕಾರ್ಯಕ್ರಮ ಪೂರ್ಣಗೊಂಡಿತು. ನಂತರ ಅತಿಥಿಗಳೂ ಕೂಡ ಮಕ್ಕಳ ಗುಂಪಿನಲ್ಲಿ ಸೇರಿಕೊಂಡು ತಾವು ಮಕ್ಕಳಂತೆಯೇ ಸಂತಸಪಟ್ಟರು.
ನಂತರ ಮಕ್ಕಳಿಗೆ ಕ್ರೀಡಾ ಸ್ಪರ್ಧೆಗಳು, ವೇಶಭೂಷಣ ಸ್ಪರ್ಧೆ, ಹಾಡುಗಾರಿಕೆ, ನೃತ್ಯ, ಆಶುಭಾಷಣ, ಚರ್ಚಾ ಸ್ಪರ್ಧೆಗಳು ನಡೆದವು. ಎಲ್ಲಾ ಸ್ಪರ್ಧೆಗಳಲ್ಲಿಯೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದುದು ವಿಶೇಷ.





