Mysore
22
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಚಾಮುಂಡಿ ಯದುವಂಶದ ಕುಲದೇವಿ : ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌

ಮೈಸೂರು : ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು, ಯದುವಂಶದ ಮನೆ ದೇವರು ಕುಲದೇವಿ ಚಾಮುಂಡಿ ಎಂದು ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಹೇಳಿದರು.

ನಗರದ ಮಾಧ್ಯಮಗಳೊಂದಿಗೆ ಮಾತನಾಡಿ, ಯದುವಂಶಕ್ಕೆ ಚಾಮುಂಡಿ ದೇವಿ ಧಾರ್ಮಿಕ ತಾಯಿ ಇದ್ದಂತೆ. ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಪೂಜೆ ನಡೆಯುತ್ತದೆ. ರಾಜಕಾರಣಿಗಳು ಏನು ಬೇಕಾದರೂ ಹೇಳಲಿ. ಕರೆಯುವವರು ಏನಾದರೂ ಕರೆಯಲಿ. ಅವರು ಹೇಳಿದ ತಕ್ಷಣ ಅವರು ಹೇಳಿದಂತೆ ಆಗೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಮನೆತನ, ದೇವಸ್ಥಾನ ವಿಚಾರದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದೆ. ಪ್ರಾಧಿಕಾರ ರಚನೆ ಆದರೂ ಅದು ಅಧಿಕೃತ ಅಲ್ಲ. ನ್ಯಾಯಾಲಯದ ಆದೇಶ ಬಂದ ಮೇಲಷ್ಟೇ ಎಲ್ಲವೂ ಸ್ಪಷ್ಟ ಆಗುವುದು. ೭೦ ವರ್ಷಗಳಿಂದ ಈ ಹೋರಾಟ ನ್ಯಾಯಾಲಯದಲ್ಲಿ ಇದೆ. ದೇವಸ್ಥಾನವನ್ನು ರಾಜಕೀಯಕ್ಕೆ ಬಳಸಿ ಕೊಂಡಿದ್ದಕ್ಕೆ ನನಗೆ ಬೇಸರವಿದೆ, ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದಸರಾ ಉದ್ಘಾಟಕರ ವಿಚಾರದಲ್ಲಿ ನನ್ನ ಅಭಿಪ್ರಾಯ ಏನು ಇಲ್ಲ. ಕರೆದವರು, ಕರೆಸಿಕೊಂಡವರಿಗಷ್ಟೇ ಅದು ಗೊತ್ತು. ಸರ್ಕಾರದ ದಸರಾ ನಮ್ಮ ಪರಂಪರೆಯ ಭಾಗವಲ್ಲ. ನಮ್ಮ ದಸರಾ ಖಾಸಗಿಯಾಗಿಯೇ ನಡೆಯಲಿದೆ. ಸರ್ಕಾರದವರು ಅವರಿಗೆ ಬೇಕಾದ ರೀತಿಯಲ್ಲಿ ದಸರಾ ಮಾಡುತ್ತಾರೆ. ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದರು.

ದಸರಾ ದಿನ ನಾನು ಅಂಬಾರಿ ಕಡೆ ಗಮನ ಕೊಡುವ ಕಾರಣ ನಾನು ಅಲ್ಲಿಗೆ ಹೋಗಲ್ಲ. ನಮ್ಮ ಮನೆಯವರು ಒಬ್ಬರು ಹೋಗುತ್ತಾರೆ ಅಷ್ಟೆ. ದಸರಾ ವಿಚಾರದಲ್ಲಿ ಇಲ್ಲಿಯವರೆಗೆ ಆಗಿರುವ ರಾಜಕೀಯವೇ ಸಾಕು. ಆ ವಿಚಾರ ಇನ್ನು ಮುಂದುವರಿಸುವುದು ಬೇಡ ಎಂದು ಹೇಳಿದರು.

Tags:
error: Content is protected !!