Mysore
33
few clouds

Social Media

ಶುಕ್ರವಾರ, 13 ಮಾರ್ಚ್ 2026
Light
Dark

ಮೈಸೂರಿನೆಲ್ಲೆಡೆ ಚಾಮುಂಡಿ ಹಬ್ಬದ ಸಂಭ್ರಮ : ಪ್ರಸಾದ ವಿತರಣೆ

Mysore Temple

ಮೈಸೂರು : ಚಾಮುಂಡೇಶ್ವರಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಹಲವೆಡೆಯ ಶಕ್ತಿ ದೇವತೆಗಳ ದೇವಸ್ಥಾನಗಳು, ರಸ್ತೆ, ವೃತ್ತಗಳಲ್ಲಿ ಚಾಮುಂಡೇಶ್ವರಿ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ನಗರದ ಅಗ್ರಹಾರ, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಚಾಮರಾಜ ಜೋಡಿ ರಸ್ತೆ, ಎಂ.ಜಿ.ರಸ್ತೆ, ಕೆ.ಜಿ.ಕೊಪ್ಪಲು, ಒಂಟಿಕೊಪ್ಪಲು, ಮಂಡಿ ಮೊಹಲ್ಲಾ, ಕುವೆಂಪುನಗರ, ಸುಣ್ಣದಕೇರಿ, ಜಯನಗರ, ಅಶೋಕಪುರಂ, ಕಾಕರವಾಡಿ, ದೊಡ್ಡ ಒಕ್ಕಲಗೇರಿಗಳಲ್ಲಿರುವ ನಾನಾ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆದವು. ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ಮಹಿಳೆಯರು ನಿಂಬೆ ಹಣ್ಣಿನ ದೀಪ ಹಚ್ಚುವ ಮೂಲಕ ಹರಕೆ ತೀರಿಸಿದರು. ನಗರದ ಪ್ರಮುಖ ಆಟೋ ನಿಲ್ದಾಣ ಮತ್ತು ವೃತ್ತಗಳಲ್ಲಿ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು.

ನಗರದ ಕೆ.ಜಿ. ಕೊಪ್ಪಲಿನಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರ್ಧಂತಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಿಗೆ ನಾನಾ ಅಭಿಷೇಕ, ಮಹಾ ಮಂಗಳಾರತಿ ನೆರವೇರಿಸಿದ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ವಿಜಯನಗರದಲ್ಲಿರುವ ಸಪ್ತಮಾತೃಕೆಯರ ದೇವಸ್ಥಾನದಲ್ಲೂ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ನಡೆಯಿತು. ಪೋರ್ಟ್ ಮೊಹಲ್ಲಾದಲ್ಲಿರುವ ಅಭಿನವ ಶಂಕರಾಲಯ ಶಂಕರ ಮಠದಲ್ಲಿ ವಿಶೇಷ ಮಹೋತ್ಸವ, ಅಭಿಷೇಕ, ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಯಿತು. ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಕೊಲ್ಲಾಪುರದಮ್ಮ ದೇವಸ್ಥಾನ, ತಿಲಕ್ ನಗರದಲ್ಲಿರುವ ಎಲ್ಲಮ್ಮ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ನಂತರ ಹೋಮ ಹವನ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯಗಳು ಜರುಗಿದವು.

Tags:
error: Content is protected !!