ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಗೆ ರಾಜ್ಯಸಭಾ ಬಿಜೆಪಿ ಸಂಸದ ಲೆಹರ್ ಸಿಂಗ್ ಪತ್ರ ಬರೆದಿದ್ದಾರೆ.
ಸಹೋದರರಂತೆ ಎರಡೂ ರಾಜ್ಯಗಳು ಪರಸ್ಪರರ ಅಗತ್ಯತೆಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಂಡು, ಲಭ್ಯವಿರುವ ಸೀಮಿತ ನೀರನ್ನು ಸಮಾನವಾಗಿ ಹಂಚಿಕೊಳ್ಳುವ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ತಮಿಳುನಾಡು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಪರಸ್ಪರ ಭೇಟಿಯಾಗಿ ಪರಿಸ್ಥಿತಿಯನ್ನು ಚರ್ಚಿಸಿದಾಗ ಮಾತ್ರ ಇದು ಸಾಧ್ಯ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಕಷ್ಟದ ಕಾಲದ ಕಾವೇರಿ ನದಿ ನೀರು ಹಂಚಿಕೆ ವಿವಾದದ ಸೂಕ್ಷ್ಮ ಸಂದರ್ಭದಲ್ಲಿ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಅಂತರ್-ರಾಜ್ಯ ನೀರಿನ ನಿರ್ವಹಣೆ, ನೀರಿನ ಒಪ್ಪಂದಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನನ್ನ ತಿಳುವಳಿಕೆ ಬಹಳ ಸೀಮಿತವಾಗಿದೆ ಎನ್ನುವುದು ನನಗೆ ತಿಳಿದಿದೆ. ಆದರೂ ಕಿಂಚಿತ್ ಸಾಮಾನ್ಯ ಜ್ಞಾನದ ದೃಷ್ಟಿಕೋನದಿಂದ ನನ್ನ ಕೆಲವು ಅನಿಸಿಕೆಗಳನ್ನು ತಮ್ಮೊಂದಿಗೆ ನಿವೇದಿಸಿಕೊಳ್ಳುತ್ತೇನೆ.
ಕರ್ನಾಟಕ ಉದ್ದೇಶಪೂರ್ವಕವಾಗಿ ನೀರನ್ನು ಹಿಡಿದಿಟ್ಟುಕೊಳ್ಳುತ್ತಿಲ್ಲ ಎನ್ನುವುದನ್ನು ತಮಿಳುನಾಡು ಅರಿತುಕೊಳ್ಳಬೇಕು. ನಮ್ಮ ಜಲಾಶಯಗಳು ಖಾಲಿಯಾಗಿವೆ ಮತ್ತು ನಮ್ಮ ರಾಜ್ಯದ ಸುಮಾರು ಶೇ.70 ರಷ್ಟು ತಾಲೂಕುಗಳಲ್ಲಿ ಬರಗಾಲವಿದೆ, ಜೊತೆಗೆ, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಕರ್ನಾಟಕದ ನೀರಿನ ಅಗತ್ಯತೆಗಳಲ್ಲಿ, ಕರ್ನಾಟಕದಲ್ಲಿ ವಾಸಿಸುವ, ಕೆಲಸ ಮಾಡುತ್ತಿರುವ ಲಕ್ಷಾಂತರ ತಮಿಳು ಭಾಷಿಕರ ನೀರಿನ ಅಗತ್ಯತೆಗಳನ್ನೂ ಒಳಗೊಂಡಿದೆ ಎನ್ನುವುದನ್ನು. ತಮಿಳುನಾಡು ಅರ್ಥಮಾಡಿಕೊಳ್ಳಬೇಕು ಎನ್ನುವುದು ನನ್ನ ಆಗ್ರಹವಾಗಿದೆ.
ನಾವು ವಲಸಿಗ ಸಮಾಜದಲ್ಲಿ ವಾಸಿಸುತ್ತಿದ್ದೇವೆ. ಅಂತರ್-ರಾಜ್ಯ ವಲಸೆಯು ಕಳೆದ ಒಂದೆರಡು ದಶಕಗಳಲ್ಲಿ ಒಂದು ಪ್ರವೃತ್ತಿಯೇ ಎನ್ನುವಂತಾಗಿದ್ದು, ಉದ್ಯೋಗದ ಕಾರಣಗಳಿಗಾಗಿ ಜನರು ತಮ್ಮ ಸ್ವಂತ ರಾಜ್ಯಗಳನ್ನು ತೊರೆದು ಬೇರೆ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ನಾವು ನೀರಿನ ಹಕ್ಕುಗಳ ಬಗ್ಗೆ ಮಾತನಾಡುವಾಗ ಸಮಕಾಲೀನ ವಲಸೆಯ ಪ್ರವೃತ್ತಿಯನ್ನು ಮತ್ತು ವಾಸ್ತವಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಚಿಂತಿಸಬೇಕಾಗಿದೆ.
ಈ ಸಂಕಷ್ಟದ ಪರಿಸ್ಥಿತಿಗೆ ಒಂದು ಉತ್ತಮ ಪರಿಹಾರವೆಂದರೆ, ಸಹೋದರರಂತೆ ಎರಡೂ ರಾಜ್ಯಗಳು ಪರಸ್ಪರರ ಅಗತ್ಯತೆಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಂಡು, ಲಭ್ಯವಿರುವ ಸೀಮಿತ ನೀರನ್ನು ಸಮಾನವಾಗಿ ಹಂಚಿಕೊಳ್ಳುವುದು, ಭ್ರಾತೃತ್ವದ ಭಾವನೆಯಿಂದ ತಮಿಳುನಾಡು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಭೇಟಿಯಾಗಿ ಪರಿಸ್ಥಿತಿಯನ್ನು ಚರ್ಚಿಸಿದಾಗ ಮಾತ್ರ ಇದು ಸಾಧ್ಯ. ಕೇಂದ್ರ ಸರ್ಕಾರ ಅಥವಾ ನ್ಯಾಯಾಲಯಗಳ ಮಧ್ಯಸ್ತಿಕೆ ಅಥವಾ ನೆರವು ಕೋರುವುದಕ್ಕಿಂತಲೂ ಇಂತಹ ಸಭೆಯಿಂದ ಹೆಚ್ಚಿನದನ್ನು ಸಾಧಿಸಬಹುದು.
ನಾವು ಕನಿಷ್ಟವೆಂದರೆ, ಕಾವೇರಿ ನದಿ ನೀರು ಹಂಚಿಕೆಯನ್ನು ಒಂದು ಪ್ರಮುಖ ವಿವಾದವಾಗಿ, ಪ್ರಾದೇಶಿಕ ಸಂಘರ್ಷವಾಗಿ ನೋಡುವ ಹಳೆಯ ಚಾಳಿಯನ್ನು ಬಿಟ್ಟು, ಪ್ರಬುದ್ಧತೆಯಿಂದ ಎರಡೂ ರಾಜ್ಯ ಸರ್ಕಾರಗಳು ಇದೊಂದು ಪರಿಹರಿಸಲೇಬೇಕಾದ ಮಾನವೀಯ ಬಿಕ್ಕಟ್ಟು ಎಂದು ಪರಿಗಣಿಸಬೇಕು. ಈ ವಿಚಾರದಲ್ಲಿ ರಾಜಕೀಯ ಲಾಭ ಅಥವಾ ಹೇಳಿಕೆಗಳ ಮೇಲಾಟಗಳಿಗೆ ಅವಕಾಶ ಇರಬಾರದು.
ಪ್ರಾಕೃತಿಕವಾದ ಈ ಬಿಕ್ಕಟ್ಟಿನ ಪರಿಹಾರದ ನಿಟ್ಟಿನಲ್ಲಿ ಆದಷ್ಟು ಬೇಗ ಪರಸ್ಪರ ಭೇಟಿಯಾಗಿ ಮಾನವೀಯ ನೆಲೆಯಲ್ಲಿ ಚರ್ಚಿಸಿ, ಸಮಸ್ಯೆಯನ್ನು ಸರಿಯಾದ ದಾರಿಯಲ್ಲಿ ನಿರ್ವಹಿಸಬೇಕೆಂದು ಮುಖ್ಯಮಂತ್ರಿಗಳನ್ನು ಮತ್ತೊಮ್ಮೆ ಅತ್ಯಂತ ಗೌರವಪೂರ್ವಕವಾಗಿ ಮನವಿ ಮಾಡುತ್ತೇನೆ.