ಮೈಸೂರು: ವಿಧಾನ ಪರಿಷತ್ ಚುನಾವಣಾ ಹಿನ್ನಲೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರ ಗೆಲ್ಲಲು ಮೈಸೂರಿನಲ್ಲಿಂದು (ಮಂಗಳವಾರ, ಮೇ.21) ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ನೇತೃತಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಲ ಪ್ರದರ್ಶನ ಮಾಡಿದರು.
ಇಲ್ಲಿನ ನಿವೇದಿತಾ ನಗರ ಕಲ್ಯಾಣ ಮಂಟಪದಲ್ಲಿ ನಡೆದ ಮೈತ್ರಿ ಸಭೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ. ವಿವೇಕಾನಂದ ಗೆಲ್ಲಿಸಲು ಒಮ್ಮತದಿಂದ ಸಹಕರಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಒಂದು ಲಕ್ಷ ಶಿಕ್ಷಕರ ನೇಮಕಾತಿ ಮಾಡಿದ್ದು, ಎಚ್.ಡಿ ದೇವೇಗೌಡರ ಸರ್ಕಾರ ಬಳಿಕ 2006-07 ರಲ್ಲಿ 50 ಸಾವಿರ ಶಿಕ್ಷಕರ ನೇಮಕಾತಿ ಮಾಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರವಾಗಿದೆ. ಹೀಗಾಗಿ ಈ ಬಾರಿ ಶಿಕ್ಷಕರು ನಮ್ಮ ಕೈ ಹಿಡಿಯಲಿದ್ದಾರೆ ಎಂದು ಎಚ್ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕರ ಮನವೊಲಿಸಲು ಮತದಾರರ ಮನೆ ಖುದ್ದು ಕಾರ್ಯಕರ್ತರು ಭೇಟಿ ನೀಡಿ ಮತ ನೀಡುವಂತೆ ಮನವಿ ಮಾಡಬೇಕು. ಮೈಸೂರು-ಚಾಮರಾಜನಗರ-ಮಂಡ್ಯ-ಹಾಸನ ಶಿಕ್ಷಕರು ದಾಖಲೆಯ ಅಂತರದಲ್ಲಿ ನಮ್ಮ ಅಭ್ಯರ್ಥಿ ವಿವೇಕಾನಂದ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ, ನಮ್ಮ ಮೈತ್ರಿ ಪಕ್ಷದ ಶಕ್ತಿಯನ್ನು ರಾಜ್ಯದ ಜನತೆ ನೋಡಿದ್ದಾರೆ. ಈ ಮೈತ್ರಿಯಿಂದ ಪರಿಷತ್ ಚುನಾವಣೆಯಲ್ಲಿ ನಮ್ಮ ಶಕ್ತಿ ಹೆಚ್ಚಿರುವುದರಿಂದ ಸರ್ಕಾರ ಭಯ ಶುರುವಾಗಿದೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಜಯ ದಾಖಲಿಸಲಿದ್ದಾರೆ. ಈ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುವ ಮೂಲಕ ಶಿಕ್ಷಣ ವಿರೋಧಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದ ದರ್ಪ, ಅಹಂಕಾರದ ಆಡಳಿತ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು. ನಮ್ಮ ಒಗ್ಗಟ್ಟಿನ ಹೋರಾಟದಿಂದ ಮಾತ್ರವೇ ಶಾಸ್ವತ ಉಳಿಗಾಲ ಸಿಗಲಿದೆ ಎಂದು ತಿಳಿಸಿದರು.
ಶಾಸಕ ಸಾ.ರಾ ಮಹೇಶ್, ಟಿ.ಎಸ್ ಶ್ರೀವಸ್ತ, ಸ್ವರೂಪ್ ಗೌಡ, ಎಚ್.ಡಿ ರೇವಣ್ಣ, ಎನ್. ಮಹೇಶ್ ಸೇರಿದಂತೆ ಹಲವು ಜೆಡಿಎಸ್-ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.