Mysore
16
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಬೈಕ್‌ ರೇಸಿಂಗ್‌ : ಕಠಿಣ ಕ್ರಮಕ್ಕೆ ಮುಂದಾದ ಪೊಲೀಸ್‌ ಇಲಾಖೆ

Bike racing: Police department ready for tough action

ಮೈಸೂರು : ಬೈಕ್ ರೇಸಿಂಗ್ ಪ್ರಕರಣದಲ್ಲಿ ತನ್ನದಲ್ಲದ ತಪ್ಪಿಗೆ ಬಲಿಯಾದ ಕಾರ್ತಿಕ್ ಎಂಬ ಯುವಕನ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತರು ನಗರದ ವರ್ತುಲ ರಸ್ತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ವ್ಹೀಲಿಂಗ್, ರೇಸಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ನಗರದ ಎನ್.ಆರ್. ಸಂಚಾರ, ಸಿದ್ದಾರ್ಥ ಸಂಚಾರ, ಕೃಷ್ಣರಾಜ ಹಾಗೂ ವಿವಿ ಮೊಹಲ್ಲಾ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳು ಹಾಗೂ ವರ್ತುಲ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುವವರು, ರೇಸಿಂಗ್ ಮಾಡುವವರನ್ನು ಇನ್ನು ಮುಂದೆ ಪೊಲೀಸರು ಹೆಡೆಮುರಿ ಕಟ್ಟಲಿದ್ದಾರೆ.

ಈ ಸಂಬಂಧ ಸೋಮವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಭಾನುವಾರ ಮುಂಜಾನೆ ನಡೆದ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ತಂಡ ರಚನೆ: ಹೆಚ್ಚಾಗಿ ರಾತ್ರಿ ವೇಳೆಯಲ್ಲಿಯೇ ಯುವಕರು ಬೈಕ್ ವ್ಹೀಲಿಂಗ್ ಹಾಗೂ ರೇಸಿಂಗ್ ನಡೆಸುತ್ತಾರೆ. ಕೆಲವೊಮ್ಮೆ ಹಗಲಿನಲ್ಲಿ ಕೂಡ ಪ್ರಮುಖ ರಸ್ತೆಗಳಲ್ಲಿ ಯುವಕರು ವ್ಹೀಲಿಂಗ್ ನಡೆಸಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದುಂಟು.
ಹೀಗಾಗಿ ಆಯುಕ್ತರು ಇಂತಹವರನ್ನು ಹದ್ದುಬಸ್ತಿನಲ್ಲಿಡಲು ಪೊಲೀಸರ ತಂಡ ರಚನೆ ಮಾಡಿದ್ದಾರೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ಓರ್ವ ಎಎಸ್‌ಐ ನೇತೃತ್ವದಲ್ಲಿ ಐವರು ಪೊಲೀಸರ ತಂಡವನ್ನು ರಚನೆ ಮಾಡಿದ್ದಾರೆ.

ನಿತ್ಯ ಎರಡು ಪಾಳಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ಒಂದು ತಂಡ ಹಾಗೂ ರಾತ್ರಿ ವೇಳೆ ಒಂದು ತಂಡ ಆಯಾ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ನಿಗಾ ವಹಿಸಲಿದೆ. ತಪ್ಪು ಮಾಡಿದವರನ್ನು ಯಾವುದೇ ಮುಲಾಜಿಲ್ಲದೆ ಬಂಧಸಲಿದೆ.

ಕರ್ಕಶ ಶಬ್ಧ: ಇದೇ ವೇಳೆ ನಗರದಾದ್ಯಂತ ಕಳೆದ ಆರು ತಿಂಗಳ ಅವಧಿಯಲ್ಲಿ ಕರ್ಕಶ ಶಬ್ಧ ಮಾಡವ ಸೈಲೆನ್ಸರ್ ಅಳವಡಿಸಿಕೊಂಡಿದ್ದ 324 ಬೈಕ್‌ಗಳನ್ನು ವಶಕ್ಕೆ ಪಡೆದು ಸೈಲೆನ್ಸರ್‌ಗಳನ್ನು ನಾಶ ಪಡಿಸಲಾಗಿದೆ. ಈ ಕಾರ್ಯಾಚರಣೆ ಸೋಮವಾರದಿಂದ ಪುನಾರಂಭವಾಗಲಿದೆ.

20 ಪ್ರಕರಣಗಳು: ನಗರದ ಎನ್.ಆರ್., ಸಿದ್ದಾರ್ಥ, ಕೆ.ಆರ್. ಹಾಗೂ ವಿವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ವ್ಹೀಲಿಂಗ್ ಹಾಗೂ ರೇಸಿಂಗ್‌ನಲ್ಲಿ ತೊಡಗಿದ್ದ ೨೦ ಮಂದಿ ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ಕೂಡ ಸೋಮವಾರದಿಂದ ವೇಗ ಪಡೆದುಕೊಳ್ಳಲಿದೆ.

ಜಾಗೃತಿ ಕಾರ್ಯಕ್ರಮ: ಇದೇ ವೇಳೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ ಮಕ್ಕಳಿಗೆ ಬೈಕ್ ಕೊಡಿಸುವ ಮುನ್ನ ಜಾಗೃತರಾಗಿರುವಂತೆ ಜನರಿಗೆ ತಿಳಿಹೇಳುವ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಆಯುಕ್ತರು ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Tags:
error: Content is protected !!