ಮೈಸೂರು: ಬೆಂಗಳೂರು ಅರಮನೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಆಡಳಿತದಲ್ಲಿ ಟಾರ್ಗೆಟ್ ಮಾಡುತ್ತಿಲ್ಲ. ಬೇರೆ ಬೇರೆ ಸರ್ಕಾರದ ಆಡಳಿತದಲ್ಲೂ ಸುಗ್ರೀವಾಜ್ಞೆ ತಂದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಜನವರಿ.27) ಬೆಂಗಳೂರು ಅರಮನೆ ಆಸ್ತಿಗೆ ಸರ್ಕಾರದಿಂದ ಸುಗ್ರೀವಾಜ್ಞೆ ತರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಗ್ಗೆ ಇನ್ನು ಸುಗ್ರೀವಾಜ್ಞೆ ಆದೇಶವಾಗಿಲ್ಲ. ಬೆಂಗಳೂರು ಅರಮನೆ ಕುರಿತು ಸುಗ್ರೀವಾಜ್ಞೆ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. 1996ರಲ್ಲಿಯೇ ಎಚ್.ಡಿ.ದೇವೇಗೌಡರು ಹಾಗೂ ಬೇರೆ ಬೇರೆ ಸರ್ಕಾರಗಳ ಆಡಳಿತದಲ್ಲೂ ಸುಗ್ರೀವಾಜ್ಞೆ ತಂದಿದ್ದಾರೆ. ಅಲ್ಲದೇ ಬೆಂಗಳೂರು ಅರಮನೆ ಸುತ್ತಲಿನ ಜಾಗ ಬೃಂದಾವನ ಅಭಿವೃದ್ಧಿಗಾಗಿ ಸುಗ್ರೀವಾಜ್ಞೆ ಹೊರಡಿಸಿದ್ದರು. ಆದರೆ ಅದನ್ನು ಅಂದಿನ ಕಾಲದಲ್ಲಿಯೇ ಚಾಲೆಂಜ್ ಮಾಡಿ ಜಯಚಾಮರಾಜೇಂದ್ರ ಅವರ ವಾರಸುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು ಎಂದರು.
ಈ ವಿಚಾರವಾಗಿ ಅಂದು ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ನಂತರ ಆ ಆದೇಶವನ್ನು ರಾಜವಂಶಸ್ಥರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆಗ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಪಾಡಿಕೊಂಡು ಹೋಗಲು ಆದೇಶಿಸಿತ್ತು. ಹೀಗಾಗಿ 2011ರಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಇಂಟೆರೆಮ್ ಅಪ್ಲಿಕೇಷನ್ ಹಾಕುತ್ತಾರೆ. ಸಾರ್ವಜನಿಕರ ಬಳಕೆಗಾಗಿ ಸ್ಥಳವನ್ನು ನೀಡಿದರೆ ತಪ್ಪೇನಿದೆ? ಮೂರು ಸಾವಿರ ಕೋಟಿ ಹಣ ಕೇಳಿದರೆ ಹೇಗೆ ಕೊಡಲು ಸಾಧ್ಯ. ಅಲ್ಲದೇ ಸರ್ಕಾರದಿಂದ ಅಷ್ಟು ಪ್ರಮಾಣದ ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇನ್ನೂ ಸಿಎಂ ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರ ಟಾರ್ಗೆಟ್ ಮಾಡಿಲ್ಲ. ಸರ್ಕಾರದ ನಿರ್ಧಾರಕ್ಕೆ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಅವರು ಕೂಡ ಕಿರುಕುಳ ಆಗುತ್ತಿದೆ ಎಂದು ಹೇಳಿಲ್ಲ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅನಾವಶ್ಯಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಬೆಂಗಳೂರು ಅರಮನೆ ವಿಚಾರದಲ್ಲಿ ಎಲ್ಲ ಸರ್ಕಾರದ ಅವಧಿಯಲ್ಲೂ ಸುಗ್ರೀವಾಜ್ಞೆ ತರಲಾಗಿದೆ. ಆದರೆ ಇದೀಗ ಬಿಜೆಪಿಯವರು ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗ ಮೈಸೂರು ರಾಜವಂಶಸ್ಥರ ಮೇಲೆ ದ್ವೇಷ ಸಾಧಿಸುತ್ತಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಟಾಂಗ್ ನೀಡಿದರು.