ಮೈಸೂರು: ನಾಡು-ನುಡಿಯ ಸೇವೆಗೆ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ಮಾಸಾಶನದ ಸೌಲಭ್ಯಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ನಾಡು-ನುಡಿಯ ಸೇವೆಗೆ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಿರಿಯ ಸಾಹಿತಿ/ಕಲಾವಿದರು ತಮ್ಮ ಸ್ವ-ವಿವರ/ ಕಲಾಪ್ರದರ್ಶನದ ದಾಖಲೆಗಳನ್ನು ಮತ್ತು ಛಾಯಾಚಿತ್ರಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅರ್ಜಿ ನಮೂನೆಯನ್ನು ಪಡೆಯಬಹುದು.
ಅರ್ಜಿ ಸಲ್ಲಿಸುವವರು ವಿವಿಧ ಕ್ಷೇತ್ರದಲ್ಲಿ 25 ವರ್ಷಗಳ ಗಣನೀಯ ಸೇವೆ ಸಲ್ಲಿಸಿರುವ ಬಗ್ಗೆ, ಕಲಾ ದಾಖಲೆಗಳು. ಸಾಹಿತಿ/ಕಲಾವಿದರು ಕನಿಷ್ಠ 58 ವರ್ಷ ವಯೋಮಾನದವರಾಗಿರಬೇಕು. ಅಂಗವಿಕಲರಾಗಿದ್ದಲ್ಲಿ ಕನಿಷ್ಠ 40 ವರ್ಷದ ವಯೋಮಾನದವರಾಗಿರಬೇಕು. ವಯಸ್ಸಿನ ಬಗ್ಗೆ ಶಿಕ್ಷಣ ಸಂಸ್ಥೆ ನೀಡಿದ ದಾಖಲಾತಿ ಪ್ರಮಾಣ ಪತ್ರ /ಶಾಲಾ ವರ್ಗಾವಣೆ ಪತ್ರ ಅಥವಾ ಅಂಕಪಟ್ಟಿ, ದೃಢೀಕೃತ ಪ್ರತಿಗಳನ್ನು ಸಲ್ಲಿಸಬೇಕು. ಒಂದು ವೇಳೆ ವಯಸ್ಸಿನ ಬಗ್ಗೆ ಮೇಲ್ಕಾಣಿಸಿದ ದಾಖಲೆಗಳು ಇಲ್ಲದಿದ್ದಲ್ಲಿ ನ್ಯಾಯಾಲಯದ ಡಿಕ್ರಿ ಆದೇಶದ ಮೂಲಕ ಪಡೆದ ಜನನ ಪ್ರಮಾಣ ಪತ್ರ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದೂ.ಸಂ:0821-2513225 ಅನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.