ಮೈಸೂರು : ರಾಜ್ಯ ಸರ್ಕಾರವು ಅಧಿಕೃತಗೊಳಿಸಿರುವ ಕುವೆಂಪು ರಚಿತ ನಾಡಗೀತೆಯಲ್ಲಿ ಬೌದ್ಧರನ್ನು ಸೇರ್ಪಡೆ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಮನವಿ ಮಾಡಿದರು.
ನಾಡಗೀತೆಗೆ ಸಂಬಂಧಿಸಿದಂತೆ ಸಾಕಷ್ಟು ವಾಗ್ವಾದ, ಭಿನ್ನಾಭಿಪ್ರಾಯಗಳಿವೆ. ಇಂತಹ ವಾಗ್ವಾದ, ಭಿನ್ನಾಭಿಪ್ರಾಯಗಳು ಎಲ್ಲಿವರೆಗೆ ಇರುತ್ತವೆಯೋ ಅಲ್ಲಿಯವರೆಗೂ ನಾವು ಜೀವಂತವಾಗಿರುತ್ತೇವೆ. ಕುವೆಂಪು ಅವರು ಹಲವು ಬಾರಿ ಈ ನಾಡಗೀತೆಯನ್ನು ತಿದ್ದುಪಡಿಗೆ ಒಳಪಡಿಸಿದ್ದಾರೆ. ಕೆಲವರು ಈ ಗೀತೆಯಲ್ಲಿ ಮಹಿಳೆಯರ ಹೆಸರು ಬರಬೇಕು ಎಂದರೆ, ಮತ್ತೆ ಕೆಲವರು ಬುದ್ಧರ ಹೆಸರು ಬಂದಿಲ್ಲ ಎಂದು ಹೇಳಿದ್ದಾರೆ. ಕೇಳಿ ಬಂದ ಪದಗಳನ್ನೆಲ್ಲಾ ಸೇರಿಸುತ್ತ್ತಾ ಹೋದರೆ ಅದು ಸ್ತುತಿ ಗೀತೆಯಾಗುತ್ತದೆ ಎಂದರು.
ಕುವೆಂಪು ಅವರು ಜೈನರುದ್ಯಾನ ಎಂಬ ಪದವನ್ನು ಬಳಸುವ ಮುನ್ನ ಬೌದ್ಧರುದ್ಯಾನ ಎಂಬ ಪದವನ್ನು ಬಳಸಿದ್ದರು. ಆದರೆ ಆ ಶಬ್ದವನ್ನು ಯಾವ ಕಾರಣಕ್ಕೆ ೭೦ ದಶಕದಲ್ಲಿ ಕೈಬಿಟ್ಟರೋ ಗೊತ್ತಿಲ್ಲ. ಆದರೆ ಆ ಶಬ್ದವನ್ನು ಇದರ ಜತೆಗೆ ಜೋಡಿಸುವುದರಿಂದ ನಾಡಿಗೂ ಗೌರವಸಲ್ಲಿಸಿದಂತಾಗುತ್ತದೆ ಮತ್ತು ನಾಡಿನ ಸಂಕೇತಕ್ಕೆ ಸೂಚಕವಾಗಿ ನಿಂತುಕೊಳ್ಳುತ್ತದೆ ಎಂದು ಹೇಳಿದರು.
ಇದರಿಂದ ನಾಡಗೀತೆಯ ಆಶಯವೂ ಪೂರ್ಣಗೊಳ್ಳುತ್ತದೆ. ಅಲ್ಲದೇ ಈ ಪದವನ್ನು ಸೇರಿಸುವುದರಿಂದ ಹಾಡುವುದಕ್ಕಾಗಲಿ, ರಾಗಕ್ಕಾಗಲೀ ಯಾವುದೇ ತೊಂದರೆಯಾಗುವುದಿಲ್ಲ. ಆದ್ದರಿಂದ ಸರ್ಕಾರವು ಬೌದ್ಧರುದ್ಯಾನ ಎಂಬ ಪದವನ್ನು ಸೇರ್ಪಡೆಗೊಳಿಸಿ, ಗೀತೆಯನ್ನು ಜಾರಿಗೆ ತರಬೇಕು ಎಂದರು.
ನಮ್ಮ ರಾಜ್ಯದ ನಾಡಗೀತೆಗೆ ಪರಂಪರೆಯೇ ಇದೆ. ಮೈಸೂರು ಸಂಸ್ಥಾನದಲ್ಲಿ ೧೮೮೧ರಲ್ಲೇ ನಾಡಗೀತೆಯನ್ನು ಹಾಡಲಾಗುತ್ತಿತ್ತು. ‘ಕಾಯೇ ಶ್ರೀ ಗೌರಿ..’ ಹಾಡು ಸಂಸ್ಥಾನದ ಗೀತೆಯಾಗಿತ್ತು. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಿಲುಗೋಳ ನಾರಾಯಣರಾಯರು ಬರೆದ ‘ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ಗೀತೆಯನ್ನು ಸ್ವಾಗತ ಗೀತೆಯಾಗಿ ಹಾಡಲಾಗಿತ್ತು. ಇದನ್ನೇ ನಾಡಗೀತೆಯಾಗಿ ಮುಂದುವರಿಸಲಾಗಿತ್ತು. ಬಳಿಕ ೧೯೭೦ರಲ್ಲಿ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಕವಿತೆಯನ್ನು ನಾಡಗೀತೆಯಾಗಿ ಆಚರಣೆಗೆ ತರಲಾಯಿತು ಎಂದರು.





