ಮೈಸೂರು : ರಂಗಕರ್ಮಿಗಳಾದ ವೈ.ಮಂಜುನಾಥ ಮತ್ತು ವಿ.ಶ್ರುತಿ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಗರದ ಬೋಗಾದಿಯ ವನಶ್ರೀ ಗಾರ್ಡನ್ಸ್ನಲ್ಲಿ ಜಾತ್ಯತೀತ ಒಲವಿನ ವಿವಾಹ ವೇದಿಕೆ ಮಾನವ ಮಂಟಪ ಸಹಯೋಗದಲ್ಲಿ ಭಾನುವಾರ ನಡೆದ ಸರಳ ವಿವಾಹದಲ್ಲಿ ಎರಡು ಕುಟುಂಬಗಳ ಸಮ್ಮತಿಯೊಂದಿಗೆ ಸರಳ ವಿವಾಹವಾದರು. ಸಾಹಿತಿ ಡಾ.ವೆಂ.ವನಜಾ ಮಂತ್ರ ಮಾಂಗಲ್ಯ ಬೋಧನೆ ಮಾಡಿದರು.
ತಿಪಟೂರು ಮೂಲದ ಶ್ರುತಿ ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದು, ನೀನಾಸಂನಲ್ಲಿ ಶಿಕ್ಷಣ ಮುಗಿಸಿ ಹೊಸದಿಲ್ಲಿಯ ಎನ್ಎಸ್ಡಿಯಲ್ಲಿ ರಂಗದ ಕೆಲಸಗಳನ್ನು ಮಾಡಿದ್ದಾರೆ. ಹಲವಾರು ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಭಾರತದ ಖ್ಯಾತ ರಂಗ ನಿರ್ದೇಶಕರೊಟ್ಟಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಮೈಸೂರು ರಂಗಾಯಣದಲ್ಲಿ ರಂಗ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನು ಓದಿ: ತಂದೆಗೆ ಹೃದಯಾಘಾತ : ಇಂದು ನಡೆಯೇಕಿದ್ದ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ಸಿರಿಗೆರೆ ಮೂಲದ ವೈ.ಮಂಜುನಾಥ ಸಹ ರಂಗಭೂಮಿಯಲ್ಲಿ ತಮ್ಮ ಛಾಪು ಮೂಡಿಸಿದ್ದು, ಧಾತ್ರಿ ರಂಗ ಸಂಸ್ಥೆ ಕಟ್ಟಿಕೊಂಡು ನಾಟಕಗಳನ್ನು ನಿರ್ದೇಶಿಸಿದ್ದು, ರಂಗ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರು ಪರಸ್ಪರ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೀಗ ಸರಳ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಾನವ ಮಂಟಪದ ಸದಸ್ಯರಾದ ಉಗ್ರನರಸಿಂಹೇಗೌಡ, ಡಾ.ಲತಾ ಮೈಸೂರು, ಈ.ಧನಂಜಯ ಎಲಿಯೂರು, ಪ್ರೊ.ಕೆ.ಕಾಳಚನ್ನೇಗೌಡ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ವಾಣಿ ಸತೀಶ್, ಪ್ರೊ.ಕಾಳೇಗೌಡ ನಾಗವಾರ, ಡಾ.ಸಿ.ಬಸವಲಿಂಗಯ್ಯ, ಸುಶೀಲ ಬಸವಲಿಂಗಯ್ಯ ಇನ್ನಿತರರು ವಿವಾಹದಲ್ಲಿ ಹಾಜರಿದ್ದರು.





