ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಅಶ್ವಾರೋಹಿಯಾಗಿ ಭಾಗವಹಿಸಲಿರುವ ಮೈಸೂರಿನ ನೂತನ ಮಹಾಪೌರ ಶಿವಕುಮಾರ್ ಅವರಿಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹಾರ್ಸ್ ಪಾರ್ಕ್ನಲ್ಲಿ ಸೋಮವಾರ ಕುದುರೆ ಸವಾರಿ ತರಬೇತಿ ಆರಂಭವಾಯಿತು.

ಟೀಶರ್ಟ್,ಟ್ರ್ಯಾಕ್ ಪ್ಯಾಂಟ್,ಶೂ ಹಾಗೂ ಹೆಲ್ಮೆಟ್ ಧರಿಸಿದ್ದ ಶಿವಕುಮಾರ್ಗೆ ತರಬೇತಿಯ ಮೊದಲ ದಿನದಂದು ಕುದುರೆ ಏರುವುದು, ಲಗಾಮು ಹಿಡಿಯುವುದು, ಸವಾರಿ ವೇಳೆ ಎಚ್ಚರ ವಹಿಸುವುದು, ಇಳಿಯುವಾಗ ಅನುಸರಿಸಬೇಕಾದ ಕ್ರಮ ಮೊದಲಾದವುಗಳನ್ನು ಅಶ್ವಾರೋಹಿ ದಳದ ಸಿಬ್ಬಂದಿ ತಿಳಿಸಿಕೊಟ್ಟರು.

ಮೊದಲು ಕುದುರೆಯ ಸಾಮರ್ಥ್ಯ, ದೈಹಿಕ ಮತ್ತು ಮಾನಸಿಕ ಲಕ್ಷಣಗಳು,ಸ್ವಭಾವ,ಗಾತ್ರ,ಎತ್ತರ, ಆಹಾರ ಪದ್ಧತಿ ಕುರಿತಂತೆ ಮಾಹಿತಿ ನೀಡಿದ ಪೊಲೀಸರು ಹೊಸಬರ ಬಗ್ಗೆ ಅದರ ಪ್ರತಿಕ್ರಿಯೆ,ಯಾವ ಸಂದರ್ಭದಲ್ಲಿ ಅದು ಉಗ್ರರೂಪ ತಾಳಬಹುದು ಎಂಬುದರ ಕುರಿತು ಮೌಂಟೆಡ್ ಕಂಪನಿತರಬೇತುದಾರ ಶ್ರೀನಿವಾಸ್,ಲೋಕೇಶ್,ಆನಂದ್ ಸಿಂಗ್ ಅವರು ವಿವರಿಸಿದರು. ಆರಂಭದಲ್ಲಿ ಮಹಾಪೌರ ಏರಿದ ಕುದುರೆಯನ್ನು ಓರ್ವ ಸಿಬ್ಬಂದಿ ಹಿಡಿದು ಮೈದಾನದಲ್ಲಿ ಮೂರ್ನಾಲ್ಕು ಸುತ್ತು ನಿಧಾನವಾಗಿ ನಡೆಸಿದರು. ಅದರ ಎಡ ಮತ್ತು ಬಲ ಭಾಗದಲ್ಲಿ ಇಬ್ಬರು ಪೊಲೀಸರು ಕುದುರೆ ಸವಾರಿ ಮಾಡಿದರು.ಬೆಳಿಗ್ಗೆ ೬ರಿಂದ ೭.೩೦ರವರೆಗೆ ಮಹಾಪೌರಿಗೆ ಕುದುರೆ ಸವಾರಿ ಕುರಿತು ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್,ಮಹಾಪೌರರಾಗಿ ಆಯ್ಕೆಯಾಗುತ್ತಿದ್ದಂತೆಯೇ ನಾಡಿನ ಅಧಿದೇವತೆ ಚಾಮುಂಡೇಶ್ವರಿದೇವಿಗೆ ಗಣ್ಯರೊಂದಿಗೆ ಪುಷ್ಪಾರ್ಚನೆ ಮಾಡುವ ಹಾಗೂ ಲಕ್ಷಾಂತರ ಜನರ ಸಮ್ಮುಖದಲ್ಲಿ ವಿಜಯದಶಮಿ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುವ ಅವಕಾಶ ದೊರೆತಿರುವುದು ನನ್ನ ಪೂರ್ವಜನ್ಮದ ಪುಣ್ಯವಾಗಿದೆ ಎಂದರು.





