Mysore
22
overcast clouds

Social Media

ಸೋಮವಾರ, 06 ಜುಲೈ 2026
Light
Dark

ವೇಶ್ಯಾವಾಟಿಕೆಯಿಂದ ಅಪ್ರಾಪ್ತ ಬಾಲಕಿಯ ರಕ್ಷಣೆ

ಮೈಸೂರು: ವೇಶ್ಯಾವಾಟಿಕೆಗೆಂದು ಕರೆತರಲಾಗಿದ್ದ ಆಂಧ್ರ ಮೂಲದ ಅಪ್ರಾಪ್ತ ಬಾಲಕಿಯನ್ನು ಒಡನಾಡಿ ಸೇವಾ ಸಂಸ್ಥೆ, ನಗರ ಮಾನವ ಸಾಗಾಣಿಕೆ ನಿಗ್ರಹ ದಳ ಮತ್ತು ಜಿಲ್ಲಾ ಮಕ್ಕಳ ಪೊಲೀಸ್ ಘಟಕದ ಜಂಟಿ ಕಾರ್ಯಾಚರಣೆಯ ಮೂಲಕ ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ರಕ್ಷಿಸಲಾಗಿದೆ.
ಆಂಧ್ರ ಮೂಲದ ೧೫ ವರ್ಷದ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದ್ದು, ಈಗಾಗಲೇ ಆಕೆ ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಒಂದು ವರ್ಷದಿಂದ ಲೈಂಗಿಕವಾಗಿ ವೇಶ್ಯಾವಾಟಿಕೆಗೆ ಬಳಕೆಯಾಗಿರುತ್ತಾಳೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಕಳೆದ ಕೆಲವು ದಿನಗಳಿಂದ ಇಬ್ಬರು ಮಹಿಳೆಯರು ಈಕೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಅವರಲ್ಲಿ ಒಬ್ಬಳನ್ನು ಬಾಲಕಿಯು ಅಮ್ಮ ಎಂದು ಕರೆಯುತ್ತಾಳಾದರೂ, ಮಹಿಳೆಯರಿಬ್ಬರೂ ಲೈಂಗಿಕ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇರುವುದು ಖಾತ್ರಿಯಾಗಿದೆ. ಬಾಲಕಿಗೂ ಅವರಿಗೂ ಯಾವುದೇ ರಕ್ತ ಸಂಬಂಧವಿಲ್ಲ.
ಬಾಲಕಿ ಹೇಳುವ ಪ್ರಕಾರ ಆಕೆ ೯ನೇ ತರಗತಿಯವರೆಗೆ ಓದಿದ್ದಾಳೆ. ಆಕೆಯ ತಂದೆ ತಾಯಿ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಾಲಕಿಯ ಸಹೋದರಿಯರು ಎಂದು ಹೇಳಿಕೊಳ್ಳುವ ಸುಮಾರು ೨೩, ೨೪ ವಯಸ್ಸಿನ ಮಹಿಳೆಯರಿಬ್ಬರು ಈಕೆಯನ್ನು ಕರೆದುಕೊಂಡು ಮೈಸೂರಿಗೆ ಬಂದು ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದರು.
ಇವರು ಈ ಮೊದಲು ಮೈಸೂರಿಗೆ ವೇಶ್ಯಾವಾಟಿಕೆ ನಡೆಸುವ ಉದ್ದೇಶದಿಂದ ಬಂದು ಹೋಗುತ್ತಿದ್ದರು ಎಂದು ಮಹಿಳೆಯರು ಖುದ್ದು ತಾವೇ ಹೇಳಿಕೊಂಡಿದ್ದಾರೆ. ಇಲ್ಲಿನ ಕೆಲ ಪಿಂಪ್‌ಗಳೊಂದಿಗೆ ಅವರು ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಒಡನಾಡಿ ಸೇವಾ ಸಂಸ್ಥೆಗೆ ಮಾಹಿತಿ ಬಂದಿತ್ತು.
ಹೀಗಾಗಿ ಮಂಗಳವಾರ ಬೆಳಿಗ್ಗೆ ಒಡನಾಡಿ ಸೇವಾ ಸಂಸ್ಥೆ ಕಾರ್ಯಕರ್ತರು ಬಾಲಕಿಯ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದರು. ಈ ವಿಚಾರ ತಿಳಿದ ಅವರು ಆಟೋದಲ್ಲಿ ಎಲ್ಲರನ್ನೂ ಕುಳ್ಳಿರಿಸಿಕೊಂಡು ಗ್ರಾಮಾಂತರ ಬಸ್‌  ನಿಲ್ದಾಣದಲ್ಲಿ ಇವರನ್ನು ಇಳಿಸಿ ಪರಾರಿಯಾಗಿದ್ದಾನೆ.
ಈ ವೇಳೆ ಮಹಿಳೆಯರು ಹಾಗೂ ಬಾಲಕಿಯನ್ನು ನಗರ ಮಾನವ ಸಾಗಾಣಿಕೆ ನಿಗ್ರಹದಳದ ನಿರೀಕ್ಷಕಿ ಅರುಣ್ ಕುಮಾರಿ, ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಎಸ್.ಶೀಲಾ ಅವರೊಂದಿಗೆ ಒಡನಾಡಿಯ ಸ್ಟ್ಯಾನ್ಲಿ, ಪರಶು, ಪ್ರದೀಪ್, ಶಶಾಂಕ್, ಸುಜನ, ಮಹಾಲಕ್ಷ್ಮಿ, ಸುಮಾ ಅವರ ತಂಡ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!