ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಆಟೋ (ಟಾಟಾ ಏಸ್) ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ೧೯ ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಬಸರಾಳು ಹೋಬಳಿಯ ಕೋಡಿಕೊಪ್ಪಲು ಗ್ರಾಮದ ಬಳಿ ನಡೆದಿದೆ.
ತಾಲೂಕಿನ ಬಿ. ಹಟ್ನ ಗ್ರಾಮದ ತಾಯಮ್ಮ (೫೫) ಎಂಬುವರೇ ಮೃತಪಟ್ಟ ಮಹಿಳೆಯಾಗಿದ್ದಾರೆ. ನಾಗೇಶ (೪೫), ಜೀವಿತಾ (೮), ಮಾನಸ (೧೩), ಮಂಜುಳಾ (೩೫), ಪ್ರಭಾ (೪೩), ದಿಶಾಂತ್ (೧೫), ಜೀವನ್ (೧೪), ಶಿಲ್ಪ (೧೧), ನಿರಂಜನ್ (೧೦), ಲಕ್ಷ್ಮೀಕಾಂತ್ (೧೫), ಪ್ರಮೋದ್ (೧೫), ಸಾಕಮ್ಮ (೭೬) ಸೇರಿದಂತೆ ೧೯ ಮಂದಿ ಗಾಯಗೊಂಡಿದ್ದಾರೆ.
ತಾಲೂಕಿನ ಬಿ. ಹಟ್ನ ಗ್ರಾಮದಿಂದ ನಾಗಮಂಗಲ ತಾಲೂಕು ಚಿಕ್ಕಯಗಟಿ ಗ್ರಾಮದಲ್ಲಿರುವ ಚಿಕ್ಕಯಗಟಿ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಹರಿಸೇವೆ ಕಾರ್ಯಕ್ರಮಕ್ಕಾಗಿ ಗೂಡ್ಸ್ ಆಟೋ (ಟಾಟಾ ಏಸ್)ನಲ್ಲಿ ತೆರಳಿದ್ದರು.
ಪೂಜೆ ಮುಗಿಸಿಕೊಂಡು ವಾಪಸ್ಸು ಬರುವಾಗ ಬಸರಾಳು ಬಳಿಯ ಕೋಡಿಕೊಪ್ಪಲು ಸಮೀಪ ಚಾಲಕ ನಿಯಂತ್ರಣ ತಪ್ಪಿದ ಗೂಡ್ಸ್ ಆಟೋ ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಆ್ಯಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ತಾಯಮ್ಮ ಅವರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವವರಲ್ಲಿ ಬಹುತೇಕರು ಮಕ್ಕಳೇ ಆಗಿದ್ದಾರೆ. ಈ ಸಂಬಂಧ ಬಸರಾಳು ಪೊಲೀಸರು ಪ್ರಕರಣ ದಾಖಲಾಗಿದೆ.




