Mysore
24
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಸ್ಮಶಾನ ಒತ್ತುವರಿ ಆರೋಪ : ವ್ಯಕ್ತಿ ವಿರುದ್ಧ ಜಿಲ್ಲಾಧಿಕಾರಿಗೆ ಗ್ರಾಮಸ್ಥರ ದೂರು

mandya complint village

ಮಂಡ್ಯ : ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಹೋಬಳಿಯ ಚೆನ್ನನಕೆರ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಮೀಸಲಿರುವ ಸರ್ವೆ ನಂ.78 ರಲ್ಲಿರುವ ಸ್ಮಶಾನವನ್ನು ಜೆ.ಆರ್.ಬಾಲಕೃಷ್ಣ ಎಂಬ ವ್ಯಕ್ತಿ ಅಕ್ರಮವಾಗಿ ಒತ್ತುವರಿ ಮಾಡಿ, ಗಣಿಗಾರಿಕೆ ಮಾಡಿಕೊಂಡು ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾಧೀಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಚೆನ್ನನಕೆರೆ ಗ್ರಾಮದ ಪರಿಶಿಷ್ಟ ಸಮುದಾಯಕ್ಕೆ ಸರ್ಕಾರವು 1997-98ನೇ ಸಾಲಿನಲ್ಲಿ ಸರ್ವೆ ನಂ.78 ರಲ್ಲಿ 1.19 ಎಕರೆ ಜಾಗವನ್ನು ಪರಿಶಿಷ್ಟ ಸಮುದಾಯದ ಸ್ಮಶಾನಕ್ಕೆ ಮಂಜೂರು ಮಾಡಿದೆ. ಜಕ್ಕನಹಳ್ಳಿ ಗ್ರಾಮದ ಜೆ.ಆರ್ ಬಾಲಕೃಷ್ಣ ಎಂಬವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸರ್ವೆ ನಂ.78ರಲ್ಲಿ ಪರವನಾಗಿ ಎಸ್.ವೈ. ನಂ.-78, ಕ್ಯೂಎಲ್-333 ಮತ್ತು ಕ್ಯೂಎಲ್-605 ರಲ್ಲಿ ಗಣಿಗಾರಿಕೆ ಮಾಡಲು ಪರವಾನಗಿ ಕೊಟ್ಟಿರುತ್ತಾರೆ. ಆದರೆ, ಬಾಲಕೃಷ್ಣ ಅವರು ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚುವರಿಯಾಗಿ ಅತಿಕ್ರಮಣ ಮಾಡಿಕೊಂಡು ಗಣಿಗಾರಿಕೆ ಮಾಡುತ್ತಿದ್ದಾರೆ. ಇದರ ಜತೆ ಇದೇ ಸರ್ವೆ ನಂ.78 ರಲ್ಲಿ ಪರಿಶಿಷ್ಟ ಸಮುದಾಯದ ಸ್ಮಶಾನದಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ. ಅಲ್ಲದೆ, ಪರವನಾಗಿ ಪಡೆಯದೆ ಸರ್ಕಾರಕ್ಕೆ ಸೇರಿದ 4 ರಿಂದ 5 ಎಕರೆ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ಮಾಡಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.

ಇದೇ ವೇಳೆ ಜಿಲ್ಲಾಧಿಕಾರಿಗಳ ಸಹಾಯಕ ಅಧಿಕಾರಿ ರೋಹಿಣಿ ಅವರಿಗೆ ಮನವಿ ಸಲ್ಲಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಲಿಂಗರಾಜು, ಆರ್.ಮಹದೇವ್, ಮದನ್, ಭರತ್, ಪ್ರಜ್ವಲ್, ಸಿ.ಎಲ್. ಕೃಷ್ಣ, ಸಿ.ಕೆ. ನಿಂಗರಾಜು, ಮಹದೇವು, ಸಂತೋಷ್ ಇತರರು ಹಾಜರಿದ್ದರು.

Tags:
error: Content is protected !!