Mysore
23
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಅಂಬೇಡ್ಕರ್‌ ಮೌಲ್ಯ ಎಂದಿಗೂ ಜೀವಂತ: ಜಿಲ್ಲಾಧಿಕಾರಿ ಕುಮಾರ

ಮಂಡ್ಯ:  ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ದೈಹಿಕವಾಗಿ ಪರಿನಿರ್ವಾಣ ಹೊಂದಿ 68 ವರ್ಷ ಕಳೆದರೂ, ಅವರ ಕೊಡುಗೆ,  ಆದರ್ಶ ಚಿಂತನೆ ಹಾಗೂ ಸಾಮಾಜಿಕ ಮೌಲ್ಯಗಳು ಎಂದಿಗೂ ಜೀವಂತವಾಗಿದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಂಬೇಡ್ಕರ್‌ ಚಿಂತನೆ, ತತ್ವ ಹಾಗೂ ಆದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.

ಭಾರತ ರತ್ನ, ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ।। ಬಿ.ಆರ್.ಅಂಬೇಡ್ಕರ್ ರವರ 68ನೇ ಪರಿನಿರ್ವಾಣ ದಿನದ ಅಂಗವಾಗಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶ ಕಂಡಂತಹ ಹೊಸ ಶಕ್ತಿ ಹಾಗೂ ಚೇತನವಾಗಿದ್ದು, ದೇಶಕ್ಕೆ ಅತಿ ದೊಡ್ಡ ಸಂವಿಧಾನವನ್ನು ಕೊಟ್ಟಂತ ಮಹಾನಾಯಕ. ಅಂತಹ ಚೈತನ್ಯ ನಮ್ಮ ದೇಶಕ್ಕೆ ದಕ್ಕಿದ್ದು ನಮ್ಮೆಲ್ಲರ ಪುಣ್ಯವಾಗಿದೆ ಎಂದರು.

ಅಂಬೇಡ್ಕರ್ ಅವರು ಕಂಡಂತಹ ಕನಸಿನ ಅನುಗುಣವಾಗಿ ಸಂವಿಧಾನದ ಆಶಯಗಳಂತೆ ಪಣತೊಟ್ಟು ನಾವೆಲ್ಲರೂ ಬದುಕಬೇಕು.ಅವರ ಚಿಂತನೆಗಳನ್ನು ನಮ್ಮ ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್  ಮಾತನಾಡಿ, ಇಂದು ಬಾಬಾ ಸಾಹೇಬ್ ಡಾ।। ಬಿ.ಆರ್.ಅಂಬೇಡ್ಕರ್ ರವರ 68ನೇ ಪರಿನಿರ್ವಾಣ ದಿನವಾಗಿದೆ. ಅವರು ಬರೆದಿರುವ ಪುಸ್ತಕಗಳು ಪ್ರಸ್ತುತ ದಿನದಲ್ಲಿಯೂ ಜೀವಂತವಾಗಿದೆ. ನಮ್ಮ ದೇಶಕ್ಕೆ ಅವರು ಕೊಟ್ಟಿರುವ ಸಂವಿಧಾನವು ನಮ್ಮ ಬದುಕಿಗೆ ದಾರಿಯಾಗಿದೆ. ಅವರು ಪ್ರತಿಯೊಬ್ಬರಿಗೂ ಸಮಾನತೆ, ಐಕ್ಯತೆ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಸಂವಿಧಾನದ ಮೂಲಕ ನೀಡಿ ಜನರಿಗೆ ಶಕ್ತಿ ತುಂಬಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ,  ಅಂಬೇಡ್ಕರ್‌ ಅವರ ಸಂವಿಧಾನದ ಆಧಾರದ ಮೇಲೆ ಇಂದಿಗೂ ಕಾನೂನು ವ್ಯವಸ್ಥೆ ನಿಂತಿದೆ. ಇವತ್ತಿನ ಕಾಲಮಾನಕ್ಕೂ ಪ್ರಸ್ತುತವಾದ ಸಂವಿಧಾನವನ್ನು ಭಾರತಕ್ಕೆ ನೀಡಿದ ಮಹಾನ್ ಚೇತನರಾಗಿದ್ದು, ಇನ್ನೂ ಸಾವಿರಾರು ವರ್ಷ ಕಳೆದರೂ ಬಾಬ ಸಾಹೇಬ್ ಹೆಸರು ಅಜರಾಮರ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ ಸಿದ್ದಲಿಂಗೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.

Tags:
error: Content is protected !!