Mysore
33
few clouds

Social Media

ಭಾನುವಾರ, 08 ಮಾರ್ಚ್ 2026
Light
Dark

ಸ್ಯಾಂಡಲ್‌ವುಡ್‌ ಖ್ಯಾತ ನಿರ್ಮಾಪಕ ನರಹಳ್ಳಿ ಜ್ಞಾನೇಶ್‌ ನಿಧನ

ಪಾಂಡವಪುರ: ಸ್ಯಾಂಡಲ್‌ವುಡ್‌ ನಿರ್ಮಾಪಕ, ನಿರ್ದೇಶಕ, ಸಂಕಲನಕಾರ ಹಾಗೂ ಸಂಘಟಕ ನರಹಳ್ಳಿ ಜ್ಞಾನೇಶ್ (೪೮) ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಾರ್ಯನಿಮಿತ್ತ ಮೈಸೂರಿನಿಂದ ಸ್ವಗ್ರಾಮಕ್ಕೆ ಬರುವ ಸಂದರ್ಭದಲ್ಲಿ ಹೃದಯಾಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತ ಜ್ಞಾನೇಶ್ ಅವರು ಇತ್ತೀಚೆಗೆ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ನಿರ್ಮಾಪಕರ ವಲಯದಿಂದ ಸ್ಪರ್ಧಿಸಿ ಮೈಸೂರು-ಮಂಡ್ಯ ಜಿಲ್ಲೆಗಳ ಪ್ರತಿನಿಧಿಸುವ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಕಳೆದ ಎರಡು ದಶಕಗಳಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರಿಯರಾಗಿದ್ದ ನರಹಳ್ಳಿ ಜ್ಞಾನೇಶ್ ಸುರೇಶ್ ಅರಸ್ ಅವರ ಬಳಿ ಸಂಕಲನ ಕಲಿತು ಹಲವಾರು ಧಾರವಾಹಿಗಳು, ಸಾಕ್ಷ್ಯ ಚಿತ್ರಗಳು, ಕಿರುಚಿತ್ರಗಳು, ಸಿನಿಮಾಗಳಿಗೆ ಸಂಕಲನಕಾರಾಗಿ ಕೆಲಸ ಮಾಡಿದ್ದರು. ಇವರು ಜಗ್ಗೇಶ್ ಅಭಿನಯದ ‘ಎದ್ದೇಳು ಮಂಜುನಾಥ’ ಸಿನಿಮಾದ ಸಂಕಲನಕ್ಕಾಗಿ ರಾಜ್ಯ ಪ್ರಶಸ್ತಿ ಸಹ ಪಡೆದಿದ್ದರು.

ಹುಟ್ಟೂರು ನರಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ಹಸಿರುಭೂಮಿ ಟ್ರಸ್ಟ್ ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ಜ್ಞಾನೇಶ್ ಅವರು ಮಂಡ್ಯ ಮತ್ತು ಮೈಸೂರು ಮತ್ತು ಮಂಡ್ಯ ಜಿಲ್ಲೆಯಾದ್ಯಂತ ಪರಿಸರ, ಸಾಹಿತ್ಯ, ಜನಪದ, ನಾಟಕ, ಸಿನಿಮಾ, ರಂಗಭೂಮಿ ಸಂಬಂಧಿಯಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಾರ್ಯೋನ್ಮುಖರಾಗುವ ಮೂಲಕ ಸಮಾಜಸೇವೆಯಲ್ಲಿ ನಿರತರಾಗಿದ್ದರು. ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದ ಹಲವು ದಿಗ್ಗಜರ ಜೊತೆಗೆ ನಿಕಟವಾದ ಸಂಪರ್ಕ ಹೊಂದಿದ್ದರು.

ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಟಿ. ಸತೀಶ್ ಜವರೇಗೌಡ, ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಬಾಲರಾಜ್, ಚಲನಚಿತ್ರ ನಾಯಕ ನಟ ಜಯಪ್ರಕಾಶ್ (ಜೆಪಿ), ಸಂಕಲನಕಾರ ನಾಗೇಂದ್ರ ಅರಸ್, ವಿನ್ಯಾಸಕಾರ ಪ್ರಕಾಶ್ ಚಿಕ್ಕಪಾಳ್ಯ, ಸಂಗೀತ ನಿರ್ದೇಶಕ ನಾಗೇಶ್ ಕಂದೇಗಾಲ, ರಂಗಕರ್ಮಿ ಚಂದ್ರು ಮಂಡ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಕಟಪೂರ್ವ ನಿರ್ದೇಶಕ ಜೆ.ಬಿ. ಸಿದ್ದೇಗೌಡ, ಪತ್ರಕರ್ತ ಜೀವನ್ಮುಖಿ ಸುರೇಶ್ ರೈತ ಸಂಘದ ಮುಖಂಡರೂ ಸೇರಿದಂತೆ ನೂರಾರು ಗಣ್ಯರು ನರಹಳ್ಳಿ ಜ್ಞಾನೇಶ್ ಅವರ ಅಂತಿಮ ದರ್ಶನ ಪಡೆದರು.

ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಪಾಂಡವಪುರ ತಾಲ್ಲೂಕಿನ ನರಹಳ್ಳಿಯಲ್ಲಿ ನೆರವೇರಿತು. ಮೃತರಿಗೆ ಪಾಂಡವಪರ ತಾಲ್ಲೂಕು ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕೋಕಿಲ, ಪುತ್ರ ಚಿರಾಗ್, ಪುತ್ರಿ ಇಂಪನಾ ಅವರನ್ನು ಅಗಲಿದ್ದಾರೆ.

Tags:
error: Content is protected !!