ಮಂಡ್ಯ: ಈ ಬಾರಿಯ ಕೇಂದ್ರ ಬಜೆಟ್ ರಾಷ್ಟ್ರಕ್ಕೆ ಅನುಕೂಲವಾಗುವ ಬಜೆಟ್ ಅಲ್ಲ, ಈ ಬಜೆಟ್ನಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಇಂದು(ಫೆಬ್ರವರಿ.2) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾರ್ಪೋರೇಷನ್ ಮತ್ತು ಪಂಚಾಯತ್ ರಾಜ್ಯದ ಬಜೆಟ್ಕ್ಕಿಂತ ಕೇಂದ್ರ ಬಜೆಟ್ ಒಂದು ಹೆಜ್ಜೆ ಕೆಳಗಿಳಿದ್ದಾರೆ. ಕೇಂದ್ರ ಸರ್ಕಾರದವರು ಪ್ರಚಾರ ಪ್ರಿಯರಾಗುತ್ತಿದ್ದಾರೆ ಅಷ್ಟೇ. ಮೂಗಿಗೆ ತುಪ್ಪ ಸವರಿಸುವ ಹಾಗೆ ಮಾಡಿದ್ದು, ಬಿಹಾರಕ್ಕೆ ಹೆಚ್ಚು ಅನುದಾನ ಬಿಡುಗಡೆ ನೀಡಿ, ಕರ್ನಾಟಕಕಕ್ಕೆ ಏನು ನೀಡಿಲ್ಲ ಎಂದು ಹೇಳಿದರು.
ಇನ್ನೂ ರಾಜ್ಯದಲ್ಲಿ 19 ಮಂದಿ ಸಂಸದರಿದ್ದು, ಪ್ರಧಾನ ಮಂತ್ರಿಯಾಗಲು ಮೋದಿ ಅವರಿಗೆ ಕರ್ನಾಟಕ ದೊಡ್ಡ ಶಕ್ತಿ ತುಂಬಿದ್ದಾರೆ. ಆದರೆ ಕೇಂದ್ರ ಬಜೆಟ್ ಮಾತ್ರ ನಮ್ಮ ರಾಜ್ಯಕ್ಕೆ ಶೂನ್ಯ ನೀಡಿದೆ. ಕೇಂದ್ರದಿಂದ ಬರಗಾಲದ ಅನುದಾನ ನೀಡಲ್ಲ, 7ನೇ ಹಣಕಾಸು ಯೋಜನೆ ವ್ಯತ್ಯಾಸದ ಹಣ ನೀಡಲ್ಲ. ಅಲ್ಲದೇ ತುಂಗಭದ್ರಾ ಅಣೆಕಟ್ಟುಗೂ ನೀಡಿಲ್ಲ, ನಾವು ಯಾವ ರೀತಿ ಈ ಬಜೆಟ್ ಅಭಿನಂದಿಸೋದು? ಎಂದು ಪ್ರಶ್ನಿಸಿದರು.
ಈ ಬಾರಿಯ ಬಜೆಟ್ನಲ್ಲಿ ಕರ್ನಾಟಕಕ್ಕೆ ವಿಶೇಷವಾದ ಕಾರ್ಯಕ್ರಮ ನೀಡಿಲ್ಲ. ಆದರೆ ತಮಿಳುನಾಡು ಮತ್ತು ಕೇರಳದವರು ತೆಗೆದುಕೊಂಡು ಹೋಗಿದ್ದಾರೆ. ನಮ್ಮ ರಾಜ್ಯದ ಜನತೆ ಏನು ಮಾಡಿದ್ದಾರೆ? ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎಂದು ನೀಡಿಲ್ಲ. ಹೀಗಾಗಿ ರಾಷ್ಟ್ರಕ್ಕೆ ಅನುಕೂಲವಾಗುವ ಬಜೆಟ್ ಅಲ್ಲ, ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಆರೋಪಿಸಿದರು.