ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕಬ್ಬು ಬೆಳೆಗಾರರ ಆರ್ಥಿಕ ಶಕ್ತಿಯಾದ ಮೈಶುಗರ್ ಕಾರ್ಖಾನೆಗೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ.
ಕಬ್ಬು ಕಟಾವು ಮಾಡಲು ಕಾರ್ಮಿಕರ ಕೊರತೆ ಇರುವ ಕಾರಣ ಕಾರ್ಖಾನೆಗೆ ಸಮರ್ಕಪವಾಗಿ ಕಬ್ಬು ಪೂರೈಕೆಯಾಗುತ್ತಿಲ್ಲ.
ಇದರ ಬೆನ್ನಲ್ಲೇ ಅವಧಿ ಮೀರಿದ ಕಬ್ಬು ಕಟಾವಾಗದೇ ಜಮೀನಿನಲ್ಲೇ ಉಳಿದಿದ್ದು, ಅನ್ನದಾತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬೆಳವಣಿಗೆಗಳ ನಡುವೆ ಮೈಶುಗರ್ ಆಡಳಿತ ಮಂಡಳಿ 68 ಮಂದಿ ಕಬ್ಬು ಕಟಾವು ಮೇಸ್ತ್ರಿಗಳಿಗೆ ನೋಟಿಸ್ ನೀಡಿದೆ.
ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಮಾಡಲು ಕಾರ್ಮಿಕರನ್ನು ಕರೆತರಲು ನೂರಾರು ಮಂದಿ ಮೇಸ್ತ್ರಿಗಳಿಗೆ ಮುಂಗಡ ಹಣ ನೀಡಲಾಗಿದೆ. ಆದರೆ ಮುಂಗಡ ಹಣ ಪಡೆದಿರುವ ಮೇಸ್ತ್ರಿಗಳು ಕಾರ್ಮಿಕರನ್ನೇ ಕರೆತರದೇ ನಿರ್ಲಕ್ಷ್ಯ ತೋರಿದ್ದಾರೆ.
ಈವರೆಗೂ ಕಾರ್ಮಿಕರನ್ನು ಕರೆತರದ ಮೇಸ್ತ್ರಿಗಳಿಗೆ ಮೈಶುಗರ್ ಆಡಳಿತ ಮಂಡಳಿ ಕೇಸು ದಾಖಲಿಸುವ ಎಚ್ಚರಿಕೆಯೊಂದಿಗೆ ನೋಟಿಸ್ ಜಾರಿಗೊಳಿಸಿದೆ.
ಇದರ ನಡುವೆ ಹಲವೆಡೆ ಕಬ್ಬಿಗೆ 14-15 ತಿಂಗಳಾಗಿದ್ದು, ಕೊಯ್ಲು ಆಗದಿರುವುದರಿಂದ ತೂಕ ಹಾಗೂ ಇಳುವರಿ ಕಡಿಮೆಯಾಗುವ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೇಸ್ತ್ರಿಗಳು ಆದಷ್ಟು ಬೇಗ ಕಾರ್ಮಿಕರನ್ನು ಕರೆತಂದು ಕಬ್ಬು ಕಟಾವು ಮಾಡಿಸಲಿ ಎಂದು ರೈತರು ಆಗ್ರಹಿಸಿದ್ದಾರೆ.