ಮಂಡ್ಯ: ಇಲ್ಲಿನ ತಾಲ್ಲೂಕು ಕಚೇರಿಯ ರೆಕಾರ್ಡ್ ರೂಮ್, ಸರ್ವೆ ದಾಖಲೆಗಳ ಡಿಜಿಟಲೀಕರಣ ಹಾಗೂ ಭೂ ಸುರಕ್ಷಾ ಯೋಜನೆಗೆ ಶಾಸಕ ಪಿ ರವಿಕುಮಾರ್ ಗುರುವಾರ ಅಧಿಕೃತವಾಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರೈತರು ತಮ್ಮ ಭೂಮಿ ದಾಖಲೆಗಳನ್ನು ಕಳೆದುಕೊಂಡು ಮತ್ತೆ ಪಡೆಯಲು ತಹಶೀಲ್ದಾರ್ ಕಚೇರಿಗೆ ತಿಂಗಳುಗಟ್ಟಲೆ ತಿರುಗಿದರು ದಾಖಲಾತಿಗಳು ದೊರೆಯುತ್ತಿರಲಿಲ್ಲ, 40-50 ವರ್ಷದ ಹಳೆಯ ಭೂ ದಾಖಲೆಗಳ ಪತ್ರದ ಕಾಗದ ಹಳೆಯದಾಗಿ ಹರಿದುಹೋಗಿ ತನ್ನ ಅಸ್ತಿತ್ವವ ಕಳೆದುಕೊಳ್ಳುತ್ತಿವೆ, ಇದನ್ನು ಮನಗಂಡು ಸರ್ಕಾರ ದಾಖಲೆಗಳ ಡಿಜಿಟಲೀಕರಣಕ್ಕೆ ಮುಂದಾಗಿದೆ. ಇದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಅವರಿಗೆ ಬೇಕಾದ ಸಮಯದಲ್ಲಿ ದಾಖಲೆಗಳ ಪ್ರಿಂಟ್ ಗಳನ್ನು ನೀಡಬಹುದಾಗಿದೆ ಎಂದು ತಿಳಿಸಿದರು.
ರೈತರ ಸಮಸ್ಯೆ ಪರಿಹರಿಸಲು ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಇಲ್ಲಿಯ ತನಕ ಕಂದಾಯ ಇಲಾಖೆಯಲ್ಲಿ ನೋಂದಣಿ ಆಗಿರುವ ಎಲ್ಲಾ ಭೂಮಿ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಕ್ಲೌಡ್ ನಲ್ಲಿ ಸಂಸ್ಕರಿಸಲಾಗುವ ಯೋಜನೆ ಇದಾಗಿದೆ ಎಂದರು.
ಭೂಸುರಕ್ಷಾ ಎಂಬ ಅಪ್ಲಿಕೇಶನ್ ನಲ್ಲಿ ನಿಮ್ಮ ಭೂ ದಾಖಲೆಯ ಸಂಖ್ಯೆಯನ್ನು ನೀಡಿದರೆ ಸಾಕು ಒಂದು ನಿಮಿಷದಲ್ಲಿ ನಿಮ್ಮ ಭೂ ದಾಖಲಾತಿ ಪತ್ರಗಳನ್ನು ನೀಡುವ ಕ್ರಾಂತಿಕಾರಿ ಯೋಜನೆಯನ್ನು ಸರ್ಕಾರ ಮಾಡಿದೆ. ಇಂದು ಡಿಜಿಟಲೀಕರಣ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿರುವುದು ಸಂತಸದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ ಕುಮಾರ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ, ಶೀತಲೀಕರಣಗೊಂಡ ಭೂಮಿ ದಾಖಲಾತಿಗಳು ಕಳೆದು ಹೋದ ಭೂಮಿ ದಾಖಲೆಗಳು ರೈತರಿಗೆ ಅನುಕೂಲವಾಗುವಂತೆ ಯಾವುದೇ ದಾಖಲಾತಿಗಳನ್ನು ಯಾರು ತಿದ್ದುಲು ಕದಿಯಲು ಅವಕಾಶ ನೀಡಿದೆ ಸ್ಕ್ಯಾನ್ ಮಾಡುವ ಮೂಲಕ ಶೇಖರಿಸಿ ಇಡುವ ಯೋಜನೆ ಇದಾಗಿದೆ ಎಂದರು.
ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ದಾಖಲೆಗಳ ಡಿಜಟಲೀಕರಣ ಕೆಲಸ ಈಗಾಗಲೇ ಪ್ರಾರಂಭಿಸಿದ್ದು, 56 ಲಕ್ಷಕ್ಕೂ ಹೆಚ್ಚು ದಾಖಲಾತಿ ಪತ್ರಗಳನ್ನು ಸ್ಕ್ಯಾನ್ ಮಾಡಲಾಗಿದೆ. ಮಂಡ್ಯ ತಾಲೂಕಿನಲ್ಲೂ ಇಂದು ಚಾಲನೆ ನೀಡಿದ್ದೇವೆ. ಇಲ್ಲೂ ಸಹ 90 ಸಾವಿರ ಕಡತಗಳಿವೆ. 45 ಲಕ್ಷಕ್ಕೂ ಹೆಚ್ಚು ದಾಖಲಾತಿ ಪತ್ರಗಳಿವೆ ಮುಂದಿನ ಒಂದು ವರ್ಷದೊಳಗೆ ಎಲ್ಲವನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕಾರಿಸುತ್ತೇವೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ಡಾ ಶಿವಕುಮಾರ ಬಿರಾದರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.