Mysore
23
overcast clouds

Social Media

ಶನಿವಾರ, 04 ಜುಲೈ 2026
Light
Dark

ಮಂಡ್ಯ: ಕುಂಟುತ್ತಾ ಸಾಗಿರುವ ದಶಪಥ ಕಾಮಗಾರಿ

೩ ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿರುವ ರೈತರು, ಗ್ರಾಮಸ್ಥರು

ಮೋಹನ್ ಕುಮಾರ್ ಬಿ.ಟಿ.

 ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ೨ನೇ ಹಂತದ ಕಾಮಗಾರಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಆದರೆ, ಕಾಮಗಾರಿ ಆರಂಭವಾಗಿ ೩ ವರ್ಷವಾದರೂ ನಿರೀಕ್ಷಿತ ಮಟ್ಟದಲ್ಲಿ ಕೆಲಸವಾಗಿಲ್ಲ. ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಭೂ ವ್ಯಾಜ್ಯ, ಅಂಡರ್ ಪಾಸ್ ನಿರ್ಮಾಣ ಬೇಡಿಕೆ ಸೇರಿದಂತೆ ಹಲವಾರು ಸಂಗತಿಗಳು ಕಾಮಗಾರಿಯ ವೇಗಕ್ಕೆ ಬ್ರೇಕ್ ಹಾಕಿವೆ.

 ಮಂಡ್ಯ ಜಿಲ್ಲೆಯ ಗಡಿಭಾಗ ಮದ್ದೂರು ತಾಲ್ಲೂಕು ನಿಡಘಟ್ಟದಿಂದ ಶ್ರೀರಂಗಪಟ್ಟಣ ತಾಲ್ಲೂಕು ನಗುವನಹಳ್ಳಿ ಗೇಟ್‌ವರೆಗೆ ಹೆದ್ದಾರಿ ಒಟ್ಟು ೧.೧೦೪ ಕಿ.ಮೀ ಉದ್ದವಿದೆ. ಆದರೆ, ಇದರಲ್ಲಿ ಕೇವಲ ೨೦.೨೬೯ ಕಿ.ಮೀ. ಮಾತ್ರವೇ ೨ನೇ ಲೇಯರ್‌ ಡಾಂಬರೀಕರಣ ನಡೆದಿದೆ. ೪೧ ಕಿ.ಮೀ. ಬಾಕಿ ಇದೆ. ಇದರೊಂದಿಗೆ ಮದ್ದೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ೩.೬೫೫ ಕಿ.ಮೀ. ಫ್ಲೈ ಓವರ್ ರಸ್ತೆ ಕಾಮಗಾರಿ ಮುಗಿದಿದ್ದು, ನವೆಂಬರ್ ಅಂತ್ಯದಿಂದ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

ಬೆಂಗಳೂರಿನಿಂದ ಮದ್ದೂರುವರೆಗೆ ಹೆದ್ದಾರಿ ಕಾಮಗಾರಿ ಮುಗಿದಿದ್ದು, ಮದ್ದೂರಿನಿಂದ ಶ್ರೀರಂಗಪಟ್ಟಣ-ಮೈಸೂರು ಸಂಪರ್ಕಿಸುವ ರಸ್ತೆ ಇನ್ನೂ ಕುಂಟುತ್ತಾ ಸಾಗಿದೆ. ಇದರಿಂದಾಗಿ ಕಳೆದ ೩ ವರ್ಷಗಳಿಂದ ಸ್ಥಳೀಯರು, ರೈತರು ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.

 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ೫ ಬೃಹತ್ ಸೇತುವೆಗಳಲ್ಲಿ ೩ ನಿರ್ಮಾಣಗೊಂಡಿದ್ದು, ೨ ಪ್ರಗತಿಯಲ್ಲಿವೆ. ೨೭ ಸಣ್ಣ ಸೇತುವೆಗಳಲ್ಲಿ ೨೩ ಪೂರ್ಣಗೊಂಡಿದ್ದು, ೪ ಪ್ರಗತಿಯಲ್ಲಿವೆ. ನಿಗದಿತ ೧೫ ಅಂಡರ್ ಪಾಸ್‌ಗಳು ಪೂರ್ಣಗೊಂಡಿವೆ. ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಬಹುತೇಕ ಗ್ರಾಮಗಳಲ್ಲಿ ಅಂಡರ್‌ಪಾಸ್ ನಿರ್ಮಿಸಲಾಗುತ್ತಿದೆ.

ಎರಡು ಕಡೆ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಉಳಿದೆಡೆ ಕಾಮಗಾರಿ ಪ್ರಗತಿಯಲ್ಲಿದೆ. ನಿಗದಿತ ಸಣ್ಣ ಸೇತುವೆಗಳು ಬಹುತೇಕ ಕಡೆಗಳಲ್ಲಿ ಪೂರ್ಣಗೊಂಡಿವೆ. ಆದರೆ, ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಗೆ ಅಡ್ಡಲಾಗಿ ೨ ದೊಡ್ಡ ಸೇತುವೆಗಳ ನಿರ್ವಾಣಕ್ಕೆ ಚಾಲನೆಯೇ ದೊರೆತಿಲ್ಲ.

ಸ್ಥಳೀಯ  ರೈತರಿಗೆ ತೊಂದರೆ

 ಹೆದ್ದಾರಿ ಮಾರ್ಗದ ಗ್ರಾಮಗಳಲ್ಲಿ ಒಂದೊಂದು ಕಡೆ ಅಂಡರ್‌ಪಾಸ್ ನಿರ್ಮಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಒಂದು ಬದಿಯಿಂದ ಮತ್ತೊಂದು ಬದಿಯಲ್ಲಿನ ಕೇವಲ ೨೦೦-೩೦೦ ಮೀ. ದೂರದ ಜಮೀನಿಗೆ ಹೋಗಲು ರೈತರು, ಜನರು ೨-೩ ಕಿ.ಮೀ. ಬಳಸಿಕೊಂಡು ಹೋಗಬೇಕಿದೆ. ಸರ್ವೀಸ್ ರಸ್ತೆಗೂ ಮುಖ್ಯ ರಸ್ತೆಗೂ ನಡುವೆ ಇರುವ ಬಾಕ್ಸ್ ಚರಂಡಿಯನ್ನು ಎತ್ತರಿಸಿರುವ ಕಾರಣ ವಾಹನಗಳು, ಎತ್ತಿನಗಾಡಿಗಳ ಓಡಾಟಕ್ಕೆ ಅಡ್ಡಿಯಾಗಿದೆ.

ಸಾರ್ವಜನಿಕರಿಗೆ ಅಗತ್ಯವಿರುವ ಕಡೆ ಅಂಡರ್‌ಪಾಸ್‌ಗಳನ್ನು ನಿರ್ಮಿಸಿಲ್ಲ. ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಜನರಿಗೆ ಉತ್ತರ ಕೊಡಲಾಗುತ್ತಿಲ್ಲ. ಭೂಸ್ವಾಧೀನದ ಪರಿಹಾರದಲ್ಲೂ ತಾರತಮ್ಯ ಮಾಡಲಾಗಿದೆ. ಇದರಿಂದ ಹೆದ್ದಾರಿಗೆ ಜಮೀನು ಕೊಟ್ಟ ಸ್ಥಳೀಯ ರೈತರಿಗೆ ಬಹಳ ತೊಂದರೆಯಾಗಿದೆ..

 – ರವೀಂದ್ರ ಶ್ರೀಕಂಠಯ್ಯ, ಶಾಸಕರು, ಶ್ರೀರಂಗಪಟ್ಟಣ

ಬೆಂಗಳೂರು-ಮೈಸೂರು ನಡುವೆ ದಶಪಥ ಹೆದ್ದಾರಿ  ಕಾಮಗಾರಿ ತ್ವರಿತವಾಗಿ ನಡೆಯಬೇಕು. ಸುತ್ತಿಬಳಸಿಕೊಂಡು ಹೆದ್ದಾರಿಯಲ್ಲಿ ಹೋಗುವಂತಾಗಿದೆ. ಟೋಲ್ ಜನಸಾಮಾನ್ಯರಿಗೆ ಹೊರೆಯಾಗಬಹುದು. ನಾವು ರಸ್ತೆ ತೆರಿಗೆ ಪಾವತಿಸುವುದರಿಂದ ಟೋಲ್ ಶುಲ್ಕ ಇಲ್ಲದಿದ್ದರೆ ಒಳ್ಳೆಯದು.

 – ಈ. ಬಸವರಾಜು, ಇಂಡುವಾಳು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!