ಬೆಂಗಳೂರು : ಕರ್ತವ್ಯ ಲೋಪದ ಆರೋಪದ ಮೇಲೆ ಮದ್ದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ಭಾನುವಾರ ರಾತ್ರಿ ಮದ್ದೂರು ನಗರದ ಚೆನ್ನೇಗೌಡನ ದೊಡ್ಡಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ರಾಮ್ ರಹೀಂ ನಗರದ ಮಸೀದಿ ಮುಂದೆ ಮೂರ್ತಿ ಸಾಗುತ್ತಿದ್ದಾಗ ಲೈಟ್ ಆಫ್ ಮಾಡಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು.
ಇದನ್ನು ಓದಿ: ಮದ್ದೂರು | ಸಾಮೂಹಿಕ ಗಣಪತಿ ವಿಸರ್ಜನಾ ಮಹೋತ್ಸವ; ಬಿಜೆಪಿ-ಜೆಡಿಎಸ್ ನಾಯಕರು ಭಾಗಿ
ಈ ಹಿನ್ನೆಲೆಯಲ್ಲಿ ಸಂಘರ್ಷ ಉಂಟಾಗಿದ್ದರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮಾರನೇ ದಿನ ಅಂದಿನ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಸಾವಿರಾರು ಮಂದಿ ಜಮಾಯಿಸಿದ್ದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಪೊಲೀಸರು ಗುಂಪನ್ನು ಚದುರಿಸಲು ಲಾಠಿಪ್ರಹಾರ ನಡೆಸಿದರು. ಆ ವೇಳೆ ಆರೇಳು ಮಂದಿ ಗಾಯಗೊಂಡರು. ಮಂಗಳವಾರ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹಾಗೂ ಸಹಸ್ರಾರು ಮಂದಿ ಪಾಲ್ಗೊಂಡು ಸಾಮೂಹಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದ್ದಾರೆ.
ಮದ್ದೂರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇದೀಗ ಇನ್ಸ್ಪೆಕ್ಟರ್ ಅಮಾನತು ಮಾಡಿದೆ. ಈ ನಡುವೆಯೇ ಮಂಡ್ಯ ಜಿಲ್ಲಾ ಅಡಿಷನಲ್ ಎಸ್ಪಿ ತಿಮಯ್ಯ ಅವರನ್ನೂ ಸಹ ಸರ್ಕಾರ ವರ್ಗಾವಣೆ ಮಾಡಿದೆ.





