ಮೈಸೂರು : ಸಾಲುಮರದ ತಿಮ್ಮಕ್ಕ ನಮ್ಮ ಜೊತೆ ಭೌತಿಕವಾಗಿ ಇಲ್ಲವಾಗಿರಬಹುದು. ಆದರೆ, ಅವರು ಕೇವಲ ನಾನು, ನನ್ನ ಮಗಳು ಕಾಲ ಅಲ್ಲ ನಮ್ಮ ಮೊಮ್ಮಕ್ಕಳ ಪೀಳಿಗೆಯಲ್ಲೂ ಇರುತ್ತಾರೆ ಎಂದು ಚಲನಚಿತ್ರ ನಟಿ ಅಕ್ಷತಾ ಪಾಂಡವಪುರ ಹೇಳಿದರು.
‘ಆಂದೋಲನ’ದೊಂದಿಗೆ ಮಾತನಾಡಿದ ಅವರು, ಪ್ರಕೃತಿ ಸಂರಕ್ಷಣೆಗೆ ತಿಮ್ಮಕ್ಕ ಅವರ ಕೊಡುಗೆ ಅಪಾರವಾಗಿದೆ. ಅವರು ನೆಟ್ಟಿರುವ ಸಸಿಗಳು ಈಗ ಮರವಾಗಿ, ಹೆಮ್ಮರವಾಗಿ ಬೆಳೆದು ನಿಂತಿವೆ. ನಾವು ಭೂಮಿಯನ್ನು ಉಳಿಸಬೇಕು, ಕಾಪಾಡಬೇಕು. ಭೂಮಿಯನ್ನು ನಾವು ಉಳಿಸಿದರೆ, ಮುಂದಿನ ಪೀಳಿಗೆಯನ್ನೇ ಉಳಿಸಿದ ಹಾಗೆ. ಆದರೆ, ಈಗ ಯಾರು ಭೂಮಿ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಮರಗಿಡಗಳನ್ನು ನೆಟ್ಟು, ಭೂಮಿಯ ಮಣ್ಣಿನ ಪದರವನ್ನು ಸುಭದ್ರ ಮಾಡುವ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಅಂತ ಹುಡುಕಿದರೂ ಯಾರೂ ಸಿಗುವುದಿಲ್ಲ. ಎಲ್ಲರೂ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಭೂಮಿಯನ್ನು ಖರೀದಿಸುವುದು, ಮಾರಾಟ ಮಾಡುವುದು..! ಭೂಮಿ ಮೇಲೆ ಎಲ್ಲರಿಗೂ ದುರಾಸೆ ಬಂದುಬಿಟ್ಟಿದೆ. ಆದರೆ ತಿಮ್ಮಕ್ಕ ಅವರು ಹಾಗಲ್ಲ. ಭೂಮಿಯನ್ನು ಉಳಿಸುವುದಕ್ಕಾಗಿ, ಹಸಿರು ಉಳಿಸುವುದಕ್ಕಾಗಿ, ಮುಂದಿನ ಪೀಳಿಗೆಗಳನ್ನು ಉಳಿಸುವುದಕ್ಕಾಗಿ ಅವರು ಸಸಿಗಳನ್ನು ನೆಟ್ಟರು. ಇದು ನಿಜಕ್ಕೂ ಎಲ್ಲರಿಗೂ ಪ್ರೇರಣೆ, ನನ್ನ ಜೀವನದಲ್ಲಂತೂ ಅವರು ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೆ, ಅವರು ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತಾರೆ ಎಂದರು.
ನಿರ್ಮಾಪಕರೊಬ್ಬರು ತಿಮ್ಮಕ್ಕ ಅವರ ಬಗ್ಗೆ ಒಂದು ಸಿನಿಮಾ ಮಾಡುತ್ತೇವೆ. ನೀವು ಅಭಿನಯಿಸಿ ಎಂದು ನನಗೆ ಹೇಳಿದ್ದರು. ನನಗೂ ಆಸೆ ಇತ್ತು. ಸಿನಿಮಾದಲ್ಲಿ ಅಭಿನಯಿಸುವುದರಿಂದ, ತಿಮ್ಮಕ್ಕ ಅವರ ಬಗ್ಗೆ ಇನ್ನು ಹೆಚ್ಚು ತಿಳಿದುಕೊಂಡಂತೆ ಆಗುತ್ತದೆ ಎಂಬ ಆಸೆಯೂ ಇತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಆಗಲಿಲ್ಲ.ಎಂದು ಅಕ್ಷತಾ ಅಭಿಪ್ರಾಯಪಟ್ಟರು.





