ಮಂಡ್ಯ: ಕರ್ನಾಟಕ ಲೋಕಸಭಾ ಚುನಾವಣೆ – 2024 ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಕ್ಷಿಪ್ರ ಸಂಚಾರಿದಳ (FST) ಮತ್ತು ಸ್ಥಾಯಿ ಕಣ್ಗಾವಲು ತಂಡ(SST), ಪೊಲೀಸ್ ತಂಡದವರು ತಪಾಸಣೆ ನಡೆಸಿದ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ಹಣವನ್ನು ಆಯಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ/ತಾಲ್ಲೂಕು ಉಪಖಜಾನೆಯ ವಶದಲ್ಲಿರಿಸಲಾಗಿತ್ತು. ಈ ಹಣವು ರಾಜಕೀಯ ಉದ್ದೇಶಕ್ಕಾಗಿ ಬಳಕೆಯಾಗದೆ ಇರುವ ಬಗ್ಗೆ ಸಂಬಂಧಿಸಿದವರಿಂದ ದಾಖಲಾತಿಗಳನ್ನು ಪಡೆದು ಪರಿಶೀಲಿಸಿ ಖಾತ್ರಿಪಡಿಸಿಕೊಂಡ ನಂತರ ಸಂಬಂಧಿಸಿದ ವ್ಯಕ್ತಿಗಳಿಗೆ ಹಣವನ್ನು ಬಿಡುಗಡೆಗೊಳಿಸಲಾಗಿದೆ.
ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಣ ಬಿಡುಗಡೆ ಸಮಿತಿ ಸಭೆ ನಡೆಸಲಾಯಿತು. ಇಂದು ನಡೆದ ಸಭೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಪ್ರಕರಣವೊಂದರಲ್ಲಿ ರೂ 70,000/- ಜಪ್ತಿ ಮಾಡಲಾಗಿತ್ತು, ಸದರಿ ಪ್ರಕರಣದಲ್ಲಿ ಸೂಕ್ತ ದಾಖಲಾತಿ ಹಾಜರುಪಡಿಸಿದ ಹಿನ್ನಲೆ ಹಣ ಬಿಡುಗಡೆಗೊಳಿಸಲು ಸಮಿತಿ ತೀರ್ಮಾನಿಸಿತು.
ಇದರೊಂದಿಗೆ ಹಣ ಬಿಡುಗಡೆ ಸಮಿತಿಯ ಮುಂದೆ ಇದ್ದ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಸಿ.ಇ.ಒ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಚಂದ್ರಶೇಖರ್, ಜಿಲ್ಲಾ ಖಜಾನೆ ಉಪನಿರ್ದೇಶಕ ಸಿದ್ದಲಿಂಗಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.