ಸೂಕ್ತ ಕ್ರಮಕ್ಕೆ ಹಿಂದೂಜಾಗರಣ ವೇದಿಕೆ ಕಾರ್ಯಕರ್ತರ ಮನವಿ
ಶ್ರೀರಂಗಪಟ್ಟಣ: ಪಟ್ಟಣದ ಸ್ನಾನಘಟ್ಟ ಕಾವೇರಿ ನದಿ ತೀರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಅಸ್ಥಿ ವಿಸರ್ಜನೆ ಕಾರ್ಯ ನಡೆಸಿ, ಕಾವೇರಿ ನದಿ ನೀರಿಗೆ ತ್ಯಾಜ್ಯಗಳ ಬಿಟ್ಟು ನದಿ ನೀರು ಮಲಿನಗೊಳಿಸಲಾಗುತ್ತಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಪುರಾತನ ಕಾಲದಲ್ಲಿ ವಿಸರ್ಜಿಸುತ್ತಿದ್ದ ಸ್ಥಳಗಳಲ್ಲೇ ಸ್ಥಳಾವಕಾಶ ಮಾಡಿ, ಸ್ವಚ್ಚತೆ ಕಾಪಾಡುವಂತೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪುರಸಭೆ ಕಚೇರಿಗೆ ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಚಂದನ್ ನೇತೃತ್ವದಲ್ಲಿ ಕಾರ್ಯಕರ್ತರು ಭೇಟಿ ನೀಡಿ, ಮುಖ್ಯಾಧಿಕಾರಿ ಎಂ.ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಕಾವೇರಿ ನದಿ ತೀರದಲ್ಲಿ ಎಲ್ಲೆಂದರಲ್ಲಿ ಅಸ್ಥಿ ವಿಸರ್ಜಿಸಿ, ನದಿ ನೀರು ಮಲಿನದ ಜೊತೆ ತ್ಯಾಜ್ಯ ವಸ್ತುಗಳ ನದಿಯಲ್ಲಿ ಬಿಟ್ಟು ಮಲಿನಗೊಳಿಸಲಾಗುತ್ತಿದೆ. ಕಾವೇರಿ ನದಿ ತೀರದ ಜಮೀನುಗಳಲ್ಲಿ ಅಕ್ರಮವಾಗಿ ಅಸ್ಥಿ ಪೂಜಾ ಶೆಡ್ಗಳ ನಿರ್ಮಿಸಿ ಧಾರ್ಮಿಕ ಕಾರ್ಯಕ್ಕೆ ಬಂದವರಿಂದ ವಸೂಲಾತಿ ನಡೆಯುತ್ತಿದೆ. ಕೂಡಲೇ ಅವುಗಳನ್ನು ತೆರವು ಮಾಡಿ ಧಾರ್ಮಿಕ ಕಾರ್ಯಕ್ಕೆ ಬರುವವರಿಗೆ ಅನುಕೂಲಗಳ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜೊತೆಗೆ ಪುರಸಭೆ ವತಿಯಿಂದಲೇ ಪೂರ್ವಾಧಿ ಕಾಲದಿಂದ ನಡೆದು ಬಂದ, ಪಶ್ಚಿಮವಾಹಿನಿ ಹಾಗೂ ಕಾವೇರಿ ಸಂಗಮ ಸ್ಥಳದಲ್ಲೇ ಅಸ್ಥಿ ವಿಸರ್ಜನೆಗೆ ಜಾಗ ಕಲ್ಪಿಸಿ, ಆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಅಲ್ಲದೆ ನಿಮ್ಮ ಸಿಬ್ಬಂದಿಗಳ ನೇಮಕ ಮಾಡಿ ನದಿಗೆ ತ್ಯಾಜ್ಯಗಳು, ಬಟ್ಟೆಗಳನ್ನು ನದಿಯಲ್ಲಿ ವಿಸರ್ಜಿಸದಂತೆ ನೋಡಿಕೊಳ್ಳಬೇಕು. ಇದರ ಜೊತೆ ನುರಿತ ಧಾರ್ಮಿಕ ಕ್ರಿಯಾ ಪೂಜೆ ನಡೆಸುವ ಪುರೋಹಿತರನ್ನು ನೇಮಕ ಮಾಡಿ, ಅವರಿಗೆ ಗುರುತಿನ ಪತ್ರ ನೀಡಿ, ಅಸ್ಥಿ ವಿಸರ್ಜನೆಗೆ ಇಂತಿಷ್ಟು ಶುಲ್ಕ ನಿಗಧಿ ಮಾಡಿ ರಶೀದಿ ಹಾಕಿ ಪುರಸಭೆಗೆ ಆದಾಯ ಬರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಬಳಿಕ ಮುಖ್ಯಾಧಿಕಾರಿ ಎಂ.ರಾಜಣ್ಣ ಮಾತನಾಡಿ, ಕಾವೇರಿ ನದಿಗೆ ಅನುಪಯುಕ್ತ ವಸ್ತುಗಳು ಸೇರಿದಂತೆ ಅಸ್ಥಿ ವಿರ್ಜನೆ ಜೊತೆ ತ್ಯಾಜ್ಯಗಳ ಬಿಟ್ಟು ನದಿ ನೀರು ಮಲೀನ ಕುರಿತು ಅದರ ಸಂರಕ್ಷಣೆ ವಿಷಯವಾಗಿ ಹೈಕೋರ್ಟ್ನಲ್ಲಿ ಕುಶಾಲ್ ಕುಮಾರ್ ಕೌಶಿಕ್ ಮತ್ತಿತರರು ರಿಟ್ ಅರ್ಜಿ ಸಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ಮಂಡ್ಯ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಅಧ್ಯಕ್ಷತೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಮಾರ್ಗದರ್ಶನದಲ್ಲಿ ತಹಸಿಲ್ದಾರ್, ಪುರಸಭೆ ಅಧ್ಯಕ್ಷರು, ಸದಸ್ಯರ ಸಭೆಯನ್ನು ಸಹ ನಡೆಸಲಾಗಿದೆ. ಈ ಸಮಸ್ಯೆ ಪರಿಹರಿಸಲು ನದಿ ಮಲಿನವನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಲು ರೂಪು ರೇಷೆಗಳ ರೂಪಿಸಿದ್ದು, ಸಾರ್ವಜನಿಕರ ಸಲಹೆ ಸೂಚನೆಗಳಿಗೂ ಒಂದು ತಿಂಗಳು ಅವಕಾಶ ನೀಡಲಾಗಿದೆ. ನಂತರ ಯಾವುದೇ ಸಮಸ್ಯೆಗಳು ಬಾರದಂತೆ ಬರುವ ಪ್ರವಾಸಿಗರು ಧಾರ್ಮಿಕ ಕಾರ್ಯ ನಡೆಸುವರಿಗೆ ಮೂಲ ಭೂತ ಸೌಕರ್ಯಗಳಿಗೆ ಒತ್ತು ನೀಡಲು ಡಿಪಿಆರ್ ಸಿದ್ಧತೆ ಮಾಡಿ ಸರ್ಕಾರದ ಗಮನಕ್ಕೆ ತಂದ ನಂತರ ಕಾರ್ಯರೂಪಗೊಳಿಸಲಾಗುತ್ತದೆ ಎಂದರು.
ಈ ವೇಳೆ ಲಕ್ಷ್ಮಿನಾರಾಯಣ, ರಾಘು, ಚೇತನ್ ಉಪಸ್ಥಿತರಿದ್ದರು.





