ಮಳವಳ್ಳಿ: ನ್ಯಾಯಾಧೀಶರೇ, ನ್ಯಾಯಾಲಯದಿಂದ ಹೊರಬಂದು ಕಕ್ಷಿದಾರರು ಇದ್ದ ಜಾಗಕ್ಕೆ ತೆರಳಿ ದಾವೆಯನ್ನು ಇತ್ಯರ್ಥಪಡಿಸಿದ ಪ್ರಸಂಗ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆದಿದೆ.
ಪಟ್ಟಣದ ನ್ಯಾಯಾಲಯದ ಅವರಣದಲ್ಲಿಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ನಡೆಯಿತು. ಈ ವೇಳೆ ದಾವೆಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸುವ ಸಮಯದಲ್ಲಿ ದಾವೆಯೊಂದರ ಕಕ್ಷಿದಾರರೊಬ್ಬರು ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಒಳಗೆ ವಿಚಾರಣೆಗೆ ಭಾಗವಹಿಸಲು ಕಷ್ಟಸಾಧ್ಯವಾಗಲಿಲ್ಲ.
ವಿಚಾರ ತಿಳಿದ ಅಪರ ಸಿವಿಲ್ ನ್ಯಾಯಾಧೀಶರು ನ್ಯಾಯಾಲಯದ ಹೊರಗೆ ಬಂದು ಕಕ್ಷಿದಾರರಿದ್ದ ಸ್ಥಳಕ್ಕೆ ಧಾವಿಸಿ ಅಹವಾಲನ್ನು ಆಲಿಸಿ ಬಳಿಕ ದಾವೆಯನ್ನು ಇತ್ಯರ್ಥಪಡಿಸಿದ್ದಾರೆ.
ನ್ಯಾಯಾಧೀಶರ ಈ ನಡೆಯನ್ನು ಸ್ಥಳದಲ್ಲಿದ್ದ ವಕೀಲರು ಹಾಗೂ ಕಕ್ಷಿದಾರರು ಮೆಚ್ಚುಗೆ ಸೂಚಿಸುವುದರ ಜೊತೆಗೆ ನ್ಯಾಯಾಧೀಶರ ಕಾರ್ಯಪರತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕಕ್ಷಿದಾರರನ್ನು ಕುರಿತು ಮಾತನಾಡಿದ ಅವರು, ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಇಡೀ ರಾಷ್ಟ್ರದಾದ್ಯಂತ ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಬಗೆಹರಿಸುವುದರ ಮೂಲಕ ವ್ಯಾಜ್ಯ ಮುಕ್ತ ಜೀವನವನ್ನು ನಿರ್ವಹಿಸಲು ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಗುತ್ತಿದೆ. ಇದಲ್ಲದೆ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಬಗೆಹರಿಸಿಕೊಂಡು ನ್ಯಾಯಾಲಯಕ್ಕೆ ಅಲೆದಾಡುವುದರ ಮೂಲಕ ನಿಮ್ಮ ಹಣ ಹಾಗೂ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಕರೆ ನೀಡಿದರು.
ಒಟ್ಟಿನಲ್ಲಿ ನ್ಯಾಯಾಧೀಶರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ, ಸರಳತೆ ಮರೆಯುವುದರ ಮೂಲಕ ಅದಾಲತ್ ಕಾರ್ಯಕ್ರಮದ ನಿಜವಾದ ಅರ್ಥಕ್ಕೆ ಉದಾಹರಣೆಯಾದರು.





