ಮಂಡ್ಯ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಜೆಡಿಎಸ್ ಯಾರನ್ನೂ ರಕ್ಷಣೆ ಮಾಡುವ ಕೆಲಸ ಮಾಡುತ್ತಿಲ್ಲ. ಪೆನ್ಡ್ರೈವ್ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಎಚ್ಡಿ ಕುಮಾರಸ್ವಾಮಿ ಅವರು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ 15 ದಿನಗಳಿಂದ ಟಿವಿ, ಮೊಬೈಲ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣ ಪ್ರಸಾರವಾಗುತ್ತಿದೆ. ಆದರೂ ಪೆನ್ಡ್ರೈವ್ ಪ್ರಕರಣ ವಿನಃಕಾರಣ ವಿಳಂಬವಾಗುತ್ತಿದೆ. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ರಾಜ್ಯದ ಜನರು ತವಕದಲ್ಲಿದ್ದಾರೆ. ಕಾಲಹರಣ ಮಾಡದೇ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಯಾರೂ ಸಂತ್ರಸ್ತ ಮಹಿಳೆಯರ ಬಗ್ಗೆ ಯೋಚಿಸುತ್ತಿಲ್ಲ. ಪೆನ್ ಡ್ರೈವ್ಗಳನ್ನು ಹಂಚಿದ್ಯಾರು ಎಂಬ ಬಗ್ಗೆ ಜನರಿಗೆ ತಿಳಿಯಬೇಕಿದೆ. ಪೆನ್ ಡ್ರೈವ್ನಲ್ಲಿ ವೀಡಿಯೋಗಳಲ್ಲಿನ ಮಹಿಳೆಯರ ಮುಖವನ್ನು ಯಾರೂ ಬ್ಲರ್ ಮಾಡಿಲ್ಲ. ಈ ಬಗ್ಗೆ ಎಸ್ಐಟಿ ಕ್ರಮ ಕೈಗೊಳ್ಳುತ್ತಿಲ್ಲ, ಈ ಆಯಾಮದಲ್ಲಿ ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದಾದರೇ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಆಗ್ರಹಿಸುತ್ತೇವೆ ಎಂದರು.