Mysore
26
scattered clouds

Social Media

ಭಾನುವಾರ, 26 ಏಪ್ರಿಲ 2026
Light
Dark

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ನಿಂದ ಅನ್ಯಾಯ : ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಧರ್ಮಗುರುಗಳು

ಮಂಡ್ಯ : ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರ ವಿರುದ್ಧ ಕೈಗೊಂಡ ಶಿಸ್ತು ಕ್ರಮ ಇದೀಗ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ದಾವಣಗೆರೆ ಉಪ ಚುಣಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಅಮಾನತಗೊಂಡ ಅಬ್ದುಲ್ ಜಬ್ಬಾರ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಂಡ ನಸೀರ್ ಅಹ್ಮದ್ ಅವರ ವಿಚಾರವಾಗಿ ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಮುಖಂಡರು ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕೈ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಈಗಾಗಲೇ ಪರಿಷತ್ ಸದಸ್ಯರು ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರಾದ ಅಬ್ದುಲ್ ಜಬ್ಬಾರ್ ಮತ್ತು ನಜೀರ್ ಅಹ್ಮದ್ ಅವರ ತಲೆದಂಡವಾಗಿದೆ. ಕಾಂಗ್ರೆಸ್ ಪಕ್ಷ ಕೈಗೊಂಡ ಈ ಕ್ರಮ ಇದೀಗ ರಾಜ್ಯ ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರನ್ನು ಕೆರಳುವಂತೆ ಮಾಡಿದೆ. ಅದಕ್ಕೆ ಪೂರಕವಾಗುವಂತೆ ಶನಿವಾರ ಮಂಡ್ಯದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.

ಇಂದು ಮಂಡ್ಯದ ಜಾಮಿಯ ಮಸೀದಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುಸ್ಲಿಂ ಧರ್ಮಗುರುಗಳು, ಮುಸ್ಲಿಂರೆಲ್ಲರೂ ಕಾಂಗ್ರೆಸ್‌ ಪಕ್ಷದ ಪರ ಇದ್ದಾರೆ. ಕಾಂಗ್ರೆಸ್‌ ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ ಎಂಬ ಭಾವನೆ ಇದೆ. ಹೀಗಾಗಿ ನಮ್ಮನ್ನೆ ಕೇವಲವಾಗಿ ನೋಡಲಾಗಿದೆ. ಆದರೆ, ನಮಗೆ ಬೇರೆ ಪಕ್ಷದ ಆಯ್ಕೆಯೂ ಇದೆ ಎಂದು ಕೈ ವರಿಷ್ಟರು ಮತ್ತು ನಾಯಕರಿಗೆ ತಿಳಿದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯ ಕಾರಣ. ಆದರೂ ನಾವು ಅದನ್ನ ಹೇಳಲು ಹೋಗಲ್ಲ. ನಮ್ಮ ಧರ್ಮದವರು ಶೇ.91ರಷ್ಟು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ನೀವು ಅಧಿಕಾರಕ್ಕೆ ಬರಲು ನಾವು ಕಾರಣಕರ್ತರಾಗಿದ್ದೇವೆ. ಹಗಲಿರುಳು ನಮ್ಮ ಮುಸ್ಲಿಂರು ನಿಮ್ಮ ಪಕ್ಷದ ಪರ ಕೆಲಸ ಮಾಡಿದ್ದೇವೆ. ಆದರೂ ನಮಗೆ ಒಂದು ಗ್ಲಾಸ್ ನೀರು ಕೊಡಲು ಹಿಂದೇಟು ಯಾಕೆ? ಎಂದು ಸಿಎಂ ಸಿದ್ದರಾಮಯ್ಯಗೆ ಮುಸ್ಲಿಂ ಧರ್ಮ ಗುರುಗಳ ಪ್ರಶ್ನೆ ಮಾಡಿದ್ದಾರೆ.

ದಾವಣಗೆರೆಯಲ್ಲಿ ಹಿಂದಿನಿಂದ ಶಾಮನೂರು ಶಿವಶಂಕರಪ್ಪರನ್ನ ಗೆಲ್ಲಿಸಿಕೊಂಡು ಬಂದಿದ್ದೇವೆ. ಈ ಬಾರಿ ನಮಗೊಂದು ಅವಕಾಶ ಕೊಡಿ ಅಂತಾ ಕೇಳಿದ್ದು ತಪ್ಪ? ಮಲ್ಲಿಕಾರ್ಜುನ ಶಾಸಕರಾಗಿ ಸಚಿವರಾಗಿದ್ದಾರೆ, ಪ್ರಭಾ ಸಂಸದರಾಗಿದ್ದಾರೆ.

ಸಮರ್ಥ್ ಗೆ ಇನ್ನೂ ವಯಸ್ಸು ಇತ್ತು. ಮುಂದಿನ ಬಾರಿ ಅವಕಾಶ ಕೊಡ್ತೀವಿ ಎಂದು ಹೇಳಬಹುದಿತ್ತು. ನಾವು ಯಾವತ್ತೂ ಸಚಿವ ಸ್ಥಾನ ಕೊಡಿ ಅಂತ ಕೇಳಿಲ್ಲ. ಬದಲಾಗಿ ಟಿಕೆಟ್‌ ನೀಡಿ ಎಂದು ಕೇಳಿದ್ದೇ ತಪ್ಪಾ? ಪ್ರಣಾಳಿಕೆಯಲ್ಲಿ ಮುಸ್ಲಿಂರಿಗೆ ಸಾಕಷ್ಟು ಭರವಸೆ ಕೊಟ್ಟಿದ್ದೀರಿ. ನೀವು ನಮ್ಮನ್ನ ಬೇಕಾದಂಗೆ, ಬೇಕಾದಾಗ ಬಳಸಿಕೊಂಡ್ರಿ, ಇವಾಗ ನಡು ನೀರಿನಲ್ಲಿ ಕೈಬಿಟ್ಟಿದ್ದೀರಿ. ಒಂದು ನೋಟೀಸ್ ಕೂಡ ಕೊಡದೆ ಈ ರೀತಿಯ ಕ್ರಮ ಎಷ್ಟು ಸರಿ. ಆತುರಾತುರವಾಗಿ ಈ ರೀತಿಯ ಕ್ರಮ ತೆಗೆದುಕೊಂಡಿರುವುದೇ ಗೊತ್ತಾಗುತ್ತೆ ನಮ್ಮನ್ನ ಎಷ್ಟು ನಿರ್ಲಕ್ಷ್ಯ ಮಾಡ್ತಿದ್ದೀರಿ ಎಂದು ಖಾರವಾಗಿಯೇ ಕಾಂಗ್ರೆಸ್‌ ವಿರುದ್ಧ ಅಸಮಾಧಾನ ಹೊರಹಾಕಿದರು.

Tags:
error: Content is protected !!