ಶ್ರೀರಂಗಪಟ್ಟಣ : ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ಮತ್ತಷ್ಟು ಹೆಚ್ಚಿಸಬೇಕೆಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಒತ್ತಾಯಿಸಿದರು.
ತಾಲ್ಲೂಕಿನ ಕೊಡಿಯಾಲ ಗ್ರಾಮದಲ್ಲಿ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ, ೨೦೨೫-೨೬ನೇ ಸಾಲಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದಿರುವ ಗ್ರಾಮದ ಬಳ್ಳಾರಿಗೌಡ ಮತ್ತು ಜಿ.ಪಿ.ಸುಧಾ ಅವರ ಪುತ್ರಿ ಕೆ.ಬಿ.ಧನ್ಯಶ್ರೀ ಅವರಿಗೆ ಲ್ಯಾಪ್ಟಾಪ್ ವಿತರಿಸಿ ಮಾತನಾಡಿದರು.
ರಾಜ್ಯದಲ್ಲಿ ಸರ್ಕಾರಿ ಶಾಲೆ, ಕಾಲೇಜು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಪ್ರಯೋಗಶಾಲೆ, ಗ್ರಂಥಾಲಯ ಸೌಲಭ್ಯ ಕೂಡ ಸರಿಯಾಗಿಲ್ಲ. ಶಿಕ್ಷಕರು ಮತ್ತು ಉಪನ್ಯಾಸಕರ ಕೊರತೆಯೂ ಕಾಡುತ್ತಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಡಕಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರ ಸಮಿತಿ ರಚಿಸಿ, ವಸ್ತುನಿಷ್ಠ ವರದಿ ಪಡೆಯಬೇಕು. ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಬಲೀಕರಣಕ್ಕೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡಲಾಗುತ್ತಿದೆ. ಅಂತಹ ವಿದ್ಯಾರ್ಥಿಗಳು ಖುದ್ದು ಸಂಪರ್ಕಿಸಿದರೆ ಅವರ ಮನೆ ಬಾಗಿಲಿಗೆ ತೆರಳಿ ಲ್ಯಾಪ್ಟಾಪ್ ವಿತರಿಸಲಾಗುವುದು ಎಂದು ಸಚ್ಚಿದಾನಂದ ತಿಳಿಸಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಪೀಹಳ್ಳಿ ಎಸ್.ರಮೇಶ್ ಮಾತನಾಡಿ, ಸಚ್ಚಿದಾನಂದ ಅವರು ತಮ್ಮ ತಂದೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಹೆಸರಿನಲ್ಲಿ ನಿರಂತರವಾಗಿ ಜನಪರ ಸೇವೆ ಮಾಡಿಕೊಂಡು ಬಂದಿದ್ದು, ಅವರು ಕೋವಿಡ್ ಸಂದರ್ಭದಿಂದಲೂ ಜನರ ಕಷ್ಟಕ್ಕೆ ಭಾಗಿ ಆಗಿರುತ್ತಾರೆ ಎಂದರು.
ಈ ವೇಳೆ ಉಪಾಧ್ಯಕ್ಷ ಮೊಳ್ಳೇನಹಳ್ಳಿ ಚಂದ್ರು, ಅರಕೆರೆ ಹೋಬಳಿ ಘಟಕದ ಅಧ್ಯಕ್ಷ ಕಶ್ಯಪ್, ಮುಖಂಡರಾದ ಸಿದ್ದರಾಜು, ಸಚಿನ್, ಕೆ.ಬಿ.ಶಿವಕುಮಾರ್, ಪುಟ್ಟೇಗೌಡ, ಮೋಹನ್, ಜಗದೀಶ್, ಅಭಿ, ಪ್ರಭಾಕರ್, ಮುರಳಿ, ಶ್ಯಾಮ್, ಚೊಟ್ಟನಹಳ್ಳಿ ಗೋವಿಂದು, ದರ್ಶನ್, ಚಿಕ್ಕ ಹಾರೋಹಳ್ಳಿ ಮಂಜು, ಕೆ.ಬಿ.ಕುಮಾರ್, ದೇವೇಗೌಡ, ಶ್ರೀಧರ್, ಬುದ್ದಿ, ಉಮೇಶ್, ಜವರೇಗೌಡ ಇತರರಿದ್ದರು.





