ಮಂಡ್ಯ : ಹಿಂದೂಗಳ ಸಂಘಟನೆಯೇ ನನ್ನ ಗುರಿ. ಹಿಂದೂಗಳ ಪರವಾಗಿ ಗಟ್ಟಿಧ್ವನಿ ಬೇಕಾಗಿದೆ. ಅದಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಬಿಜೆಪಿ ಅಸ್ತಿತ್ವವೇ ಇಲ್ಲದ ಮಂಡ್ಯದಲ್ಲಿ ಇಷ್ಟು ಜನರು ಸೇರಿದ್ದು ಹಿಂದುತ್ವದ ಸಲುವಾಗಿ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣೇಶ ಮೂರ್ತಿ ಮೆರವಣಿಗೆ ಮೇಲೆ ಕಲ್ಲು ತೂರಿದ ಘಟನೆಯಿಂದಾಗಿ ಹಿಂದೂಗಳಲ್ಲಿ ಜಾಗೃತಿಯಾಗಿದೆ. ಶೇ.೪ರಷ್ಟು ಇದ್ದವರು ಶೇ.೩೦-೪೦ರಷ್ಟಾದರೆ ನಮ್ಮ ಗತಿ ಏನೆಂಬ ಭಾವನೆ ಹಿಂದೂಗಳಲ್ಲಿ ಮೂಡಿದೆ. ಸನಾತನ ಧರ್ಮದ ರಕ್ಷಣೆಯಾಗಬೇಕು ಎಂದರು.
ಇದನ್ನು ಓದಿ : ಕಲ್ಲು ತೂರಾಟ ಯಾರೇ ಮಾಡಿದ್ದರೂ ಖಂಡನೀಯ, ಶಿಕ್ಷಾರ್ಹ ಅಪರಾಧ: ಸಚಿವ ಎಚ್ಸಿಎಂ
ಮಂಡ್ಯದಲ್ಲಿ ಹಿಂದೂಗಳು ಹೆಚ್ಚು ಜಾಗೃತಿಗೊಳ್ಳುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆ ಪ್ರವಾಸ ಮಾಡುತ್ತಿದ್ದೇನೆ. ಎಲ್ಲೆಡೆ ಮಂಡ್ಯವನ್ನು ಉದಾಹರಣೆ ಕೊಡುತ್ತಿದ್ದೇನೆ. ಹಿಂದೂ ದೇವಾಲಯಗಳಲ್ಲಿ ಶಸ್ತ್ರಾಸ್ತ್ರ ಸಿಗುವುದಿಲ್ಲ. ರಂಜಾನ್, ಈದ್ ಮಿಲಾದ್ ಮೆರವಣಿಗೆ ಮೇಲೆ ಹಿಂದೂಗಳು ಕಲ್ಲು ಎಸೆಯಲ್ಲ. ಆದರೆ, ನಾಗಮಂಗಲ, ಮದ್ದೂರಿನಲ್ಲಿ ಮುಸ್ಲಿಮರು ಗಣೇಶ ಮೆರವಣಿಗೆ ಮೇಲೆ ಕಲ್ಲು ಎಸೆದರು. ಇದರಿಂದಾಗಿ ಹಿಂದೂ ಸಮುದಾಯ ಜಾಗೃತಿಯಾಗುತ್ತಿದೆ ಎಂದರು.
ಬಿಜೆಪಿ ಸರ್ಕಾರ ಹಿಂದೂಗಳ ಮೇಲಿನ ಕೇಸ್ ವಾಪಸ್ ಪಡೆದಿರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಮುಸ್ಲಿಂ ಗೂಂಡಾಗಳ ಮೇಲಿದ್ದ ಕೇಸ್ ವಾಪಾಸು ಪಡೆಯಿತು. ಕಾಂಗ್ರೆಸ್ ಸರ್ಕಾರ ಗಣೇಶೋತ್ಸವ ವೇಳೆ ಡಿಜೆ ಬ್ಯಾನ್ ಮಾಡಿದೆ. ಡಿಜೆ ನಿಷೇಧ ವಿಚಾರದಲ್ಲಿ ಒಂದು ಜಿಲ್ಲೆಗೆ ಒಂದೊಂದು ಕಾನೂನು. ದಿನಕ್ಕೆ ಐದು ಸಲ ಮಸೀದಿಯಲ್ಲಿ ಧ್ವನಿವರ್ಧಕ ಹಾಕುತ್ತಾರೆ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಧ್ವನಿವರ್ಧಕ ಬಳಸುತ್ತಿದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಹಾಜರಿದ್ದರು.





