ಪಾಂಡವಪುರ : ಜಿಲ್ಲೆಯ ಜನರ ನಿರೀಕ್ಷೆಯಂತೆ ಕೇಂದ್ರ ಸಚಿವನಾಗಿ ನನ್ನ ಅಧಿಕಾರದ ಅವಧಿಯೊಳಗೆ ಜಿಲ್ಲೆಗೊಂದು ಕೈಗಾರಿಕೆಯನ್ನು ತಂದೇ ತರುತ್ತೇವೆ ಎಂದು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ತಾಲ್ಲೂಕಿನ ಬಳಿಘಟ್ಟ ಗ್ರಾಮದಲ್ಲಿ ನೂತನ ರಾಮಮಂದಿರ, ಮಾರಮ್ಮದ ದೇವಸ್ಥಾನ, ಊಟದ ಹಾಲ್ ಉದ್ಘಾಟನೆ ಮಾಡಿ, ಗ್ರಾಮಸ್ಥರಿಂದ ಅಭಿನಂದನೆಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲೆಯ ಜನತೆ ನನ್ನನ್ನು ಸಂಸದನಾಗಿ ಆಯ್ಕೆಮಾಡಿ, ಕೇಂದ್ರ ಸಚಿವನಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಜತೆಗೆ ಜಿಲ್ಲೆಯ ಜನತೆ ನನ್ನ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನನ್ನ ಕೇಂದ್ರ ಸಚಿವ ಸ್ಥಾನದ ಅವಧಿ ಇನ್ನೂ ೩ ವರ್ಷಗಳ ಅವಧಿ ಇದೆ, ಮುಂದಿನ ವಿಧಾನಸಭೆ ಚುನಾವಣೆಗೆ ರಾಜ್ಯ ರಾಜಕಾರಣಕ್ಕೆ ಮರಳಬೇಕು ಎನ್ನುವುದು ಜನತೆಯ ಒತ್ತಾಯವಾಗಿದೆ. ಇನ್ನೂ ಎರಡು ವರ್ಷದ ಅವಧಿಯ ಒಳಗಾಗಿ ಜಿಲ್ಲೆಯ ಜನರ ನಿರೀಕ್ಷೆಯಂತೆ ಕೈಗಾರಿಕೆ ತರುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜನಸೇವಕ ಸಿಎಸ್ಪಿ ಕೈಹಿಡಿಯಿರಿ:
ಮೇಲುಕೋಟೆ ಕ್ಷೇತ್ರದ ಜನತೆ ಜಾಗೃತರಾಗಬೇಕು, ಗೆದ್ದರೂ ಸೋತರೂ ಕ್ಷೇತ್ರದಲ್ಲಿ ಇದ್ದು ಕೆಲಸ ಮಾಡುವ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಚುನಾವಣೆಯ ಸಮಯದಲ್ಲಿ ಕೈಹಿಡಿಯಬೇಕು, ಅದನ್ನು ಬಿಟ್ಟು ಭಾರತ ಹಾಗೂ ಅಮೆರಿಕಕ್ಕೆ ಪ್ರವಾಸ ಮಾಡುವ ವ್ಯಕ್ತಿಯನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದೀರಿ. ಅವರು ಅಲ್ಲೊಂದು ಇಲ್ಲೊಂದು ಕಾರ್ಯಕ್ರಮದಲ್ಲಿ ಭಾಗಹಿಸುತ್ತಾರೆ. ಹೆಗಲ ಮೇಲೆ ಹಸಿರು ಟವಲ್ ಹಾಕಿಕೊಂಡು ರೈತರ ಧ್ವನಿಯಾಗಿ ಕೆಲಸ ಮಾಡಿದ್ದನ್ನು ನಾನೆಂದೂ ನೋಡಿಲ್ಲ ಎಂದ ಶಾಸಕ ದರ್ಶನ್ ಪುಟ್ಟಂಣ್ಣಯ್ಯ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ಸಿ.ಎಸ್.ಪುಟ್ಟರಾಜು ಅವರು ಸಚಿವರಾಗಿದ್ದಾಗ ಕ್ಷೇತ್ರಕ್ಕೆ ರಸ್ತೆಗಳು, ನೀರಾವರಿ, ಶಿಕ್ಷಣ, ಆರೋಗ್ಯ ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಇಂತಹ ಜನಸೇವಕನನ್ನು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.




