Mysore
23
clear sky

Social Media

ಶುಕ್ರವಾರ, 20 ಮಾರ್ಚ್ 2026
Light
Dark

ಯುವ ರೈತರ ಮದುವೆಯಾಗುವ ಯುವತಿಯರಿಗೆ 5 ಲಕ್ಷ ನೀಡಲಿ ; ಮನನೊಂದ ರೈತ ಮಕ್ಕಳು ಮುಖ್ಯಮಂತ್ರಿಗೆ ಮನವಿ

ಮಂಡ್ಯ : ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹವಾಗಿ ೫ ಲಕ್ಷ ರೂ.ಗಳನ್ನು ನೀಡುವಂತೆ ಮನನೊಂದ ರೈತ ಮಕ್ಕಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ರೈತರ ಮಕ್ಕಳು, ಒಂದು ಕಡೆ ನಿರುದ್ಯೋಗ ಸಮಸ್ಯೆ, ರಾಜ್ಯ ಸರ್ಕಾರದಿಂದ ಯಾವುದೇ ಸರ್ಕಾರಿ ಕೆಲಸಕ್ಕೆ ನೇಮಕಾತಿಯಾಗಿಲ್ಲ. ಸರ್ಕಾರದ ನೀತಿಯಿಂದಾಗಿ ಖಾಸಗಿ ಕಂಪನಿಗಳು ಕರ್ನಾಟಕಕ್ಕೆ ಉದ್ಯಮ ಸ್ಥಾಪನೆಗಾಗಿ ಬರುತ್ತಿಲ್ಲ. ರೈತತರ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲ, ಇತ್ತ ಬೆಳೆ ಬೆಳೆಯಲು ನೀರು ಇಲ್ಲ. ಕೃಷಿಯನ್ನು ನಂಬಿಕೊಂಡವರ ಬದುಕು ಮೂರಾಬಟ್ಟೆಯಾಗಿದೆ ಎಂದು ದೂರಿದರು.

ಇತ್ತ ಕೃಷಿಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಳ್ಳಬೇಕೆಂದಿರುವ ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಇದರಿಂದ ಯುವ ರೈತರಿಗೆ ಬದುಕಿನ ಗ್ಯಾರಂಟಿ ಇಲ್ಲವಾಗಿದೆ. ಹಾಗಾಗಿ ಸರ್ಕಾರ ಶಾದಿ ಭಾಗ್ಯದ ಮಾದರಿಯಲ್ಲಿ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದ ವತಿಯಿಂದ ೫ ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ನೀಡುವ ಮೂಲಕ ರೈತ ಮಕ್ಕಳನ್ನು ಮದುವೆಯನ್ನು ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಕಾಲುಜಾರಿ ನೀರಿನಲ್ಲಿ ಮುಳುಗಿ ಯುವಕ ಸಾವು

ಮದುವೆಯಾಗುವ ಯುವಕ-ಯುವತಿಯರಿಗೆ ಸರ್ಕಾರದ ವತಿಯಿಂದ ಸರಳ ಸಾಮೂಹಿಕ ವಿವಾಹ ಮಾಡಿಕೊಡುವ ವ್ಯವಸ್ಥೆ ಮಾಡಿಕೊಡುವ ಮೂಲಕ ಯುವ ರೈತರ ಬದುಕಿಗೆ ಗ್ಯಾರಂಟಿ ನೀಡಬೇಕು ಎಂದು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಉತ್ತರ ಕರ್ನಾಟಕ, ಹಳೆಮೈಸೂರು ಭಾಗ ಎನ್ನುವ ತಾರತಮ್ಯವಿಲ್ಲದೆ ಅಖಂಡ ಕರ್ನಾಟಕಕ್ಕೆ ಈ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ರೈತ ಮಕ್ಕಳಾದ ಆನಂದ, ಗೊರವಾಲೆ ಶಿವಣ್ಣ, ಮುಖಂಡರಾದ ಸಿ.ಟಿ. ಮಂಜುನಾಥ್, ಹೊಸಹಳ್ಳಿ ಶಿವು, ಜಯರಾಮು, ಬಿ.ಟಿ. ಶಿವಲಿಂಗಯ್ಯ, ವೈರಮುಡಿ, ಸಾಗರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:
error: Content is protected !!