ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್ ಬೆಳಕಿಗೆ ಬಂದಿದ್ದು, ರಾತ್ರೋರಾತ್ರಿ ಜೆಡಿಎಸ್ ಕಟೌಟ್ ತೆರವಿಗೆ ಮುಂದಾಗಿದ್ದ ಪುರಸಭೆ ಸಿಬ್ಬಂದಿ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ ಫ್ಲೆಕ್ಸ್ ತೆರವು ಎಂದು ಆರೋಪ ಮಾಡಲಾಗಿದ್ದು, ಮಧ್ಯರಾತ್ರಿ ಸಿಬ್ಬಂದಿಗಳ ಜೊತೆ ಜೆಡಿಎಸ್ ಕಾರ್ಯಕರ್ತರು ಜಟಾಪಟಿಗೆ ಇಳಿದಿದ್ದಾರೆ.
ನಾಗಮಂಗಲಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. ಜನತಾದಳ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ನಿಖಿಲ್ಗೆ ಸ್ವಾಗತ ಕೋರಿ ಕಾರ್ಯಕರ್ತರು ಪಟ್ಟಣದಲ್ಲಿ ಕಟೌಟ್ ಅಳವಡಿಸಿದ್ದಾರೆ.
ಆದರೆ ರಾತ್ರೋರಾತ್ರಿ ಪುರಸಭೆ ಸಿಬ್ಬಂದಿಗಳು ಫ್ಲೆಕ್ಸ್ ತೆರವುಗೊಳಿಸಲು ಮುಂದಾಗಿದ್ದು, ಅಧಿಕಾರಿಗಳ ನಿಲುವಿಗೆ ಜೆಡಿಎಸ್ ಕಾರ್ಯಕರ್ತರು ಕೆರಳಿ ಕೆಂಡವಾಗಿದ್ದಾರೆ.
ನಿಖಿಲ್ ನಾಗಮಂಗಲಕ್ಕೆ ಬರುತ್ತಿರುವುದನ್ನು ಯಾರಿಗೂ ಸಹಿಸಲು ಆಗುತ್ತಿಲ್ಲ. ಕಾಂಗ್ರೆಸ್ ನಾಯಕರ ಸೂಚನೆ ಮೇರೆಗೆ ಏಕಾಏಕಿ ರಾತ್ರೋರಾತ್ರಿ ಫ್ಲೆಕ್ಸ್ ತೆಗೆಯುತ್ತಿದ್ದಾರೆ. ಕಾಂಗ್ರೆಸ್ ಫ್ಲೆಕ್ಸ್ಗಳು ತಿಂಗಳುಗಟ್ಟಲೇ ರಾರಾಜಿಸುತ್ತಿದ್ದರೂ ಯಾರೂ ಕೂಡ ಕೇಳುತ್ತಿರಲಿಲ್ಲ. ಆದರೆ ಜೆಡಿಎಸ್ ಫ್ಲೆಕ್ಸ್ ಮೇಲೆ ಯಾಕೆ ಸೇಡು ಎಂದು ವಾಗ್ವಾದ ಮಾಡಿದ ಘಟನೆ ನಡೆದಿದೆ.





