ಮದ್ದೂರು: ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಮಯಕ್ಕೆ ಸರಿಯಾಗಿ ಕೆಲಸ ಮಾಡದೇ ಇರುವವರಿಗೆ ತೀವ್ರತರದ ತಲಾಟೆ ತೆಗೆದುಕೊಂಡು ನೋಟಿಸ್ ಜಾರಿ ಮಾಡುವಂತೆ ಆದೇಶ ಮಾಡಿದರು.
ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಹಾಜರಿದ್ದ ಸಾರ್ವಜನಿಕರು ಆರ್ಟಿಸಿ ತಿದ್ದುಪಡಿ, ಪೋಡಿ ತಿದ್ದುಪಡಿ, ಜನನ- ಮರಣ ಪ್ರಮಾಣ ಪತ್ರ ಕುರಿತು ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಖುದ್ದು ಸ್ವೀಕರಿಸಿ ಕುಂದು ಕೊರತೆಗಳನ್ನು ಆಲಿಸಿದರು.
ಈ ವೇಳೆ ಸಾರ್ವಜನಿಕರು ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ದುರಾಡಳಿತ, ಸರಿಯಾದ ವೇಳೆಯಲ್ಲಿ ಕೆಲಸಕ್ಕೆ ಹಾಜರಾಗದೆ ತಮ್ಮ ಜಾಗದಲ್ಲಿ ಕುಳಿತುಕೊಳ್ಳದೆ ಅಲ್ಲಿ ಇಲ್ಲಿ ಅಲೆದಾಡುತ್ತ, ಕಾಲ ಕಳೆಯುತ್ತಿರುವ ಸಿಬ್ಬಂದಿಗಳು, ಅಧಿಕಾರಿಗಳ ಮೇಲೆ ಹಾಗೂ ಲಂಚಗುಳಿತನದ ಬಗ್ಗೆ ದೂರು ನೀಡಿದರು.
ಜಿಲ್ಲಾಧಿಕಾರಿಗಳು ಅರ್ಜಿಗಳನ್ನು ತಹಸಿಲ್ದಾರ್ ಪರುಶುರಾಮ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳಿಗೆ ನೀಡಿ ನಿಯಮಾನುಸಾರ ಅರ್ಜಿಗಳು ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಸರ್ಕಾರಿ ಕೆಲಸಗಳಿಗೆ ತಾಲ್ಲೂಕು ಕಚೇರಿಗೆ ವಿನಾ ಕಾರಣ ಅಲೆದಾಡಿಸಬಾರದು. ಈ ಬಗ್ಗೆ ದೂರುಗಳು ಕಂಡುಬಂದಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ನಂತರ ವಿವಿಧ ಶಾಖೆಗಳ ಅಧೀಕಾರಿಗಳು, ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಕಡತಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸಿದರು. ನಿಗದಿಪಡಿಸಿರುವ ಸಮಯಕ್ಕೆ ಎಲ್ಲಾ ಅರ್ಜಿಗಳು ವಿಲೇವಾರಿ ಮಾಡಬೇಕು ಎಂದು ಎಚ್ಚರಿಸಿದರು.
ಆರ್ಟಿಸಿ ವಿತರಣಾ ಕೇಂದ್ರ ಸೇರಿದಂತೆ ವಿವಿಧ ಸರ್ವೇ ಶಾಖೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ನಿಯಮಿತ ಕಾಲಾವಧಿಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಜನನ ಮರಣ ಶಾಖೆಯಲ್ಲಿ ನಿಯಮಿತ ಕಾಲಮಿತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಗ್ರೇಡ್ ೨ ತಹಸೀಲ್ದಾರ್ ಆರ್. ಸೋಮಶೇಖರ್ಗೆ ರೆಕಾರ್ಡ್ ರೂಮ್ನಲ್ಲಿ ತುರ್ತಾಗಿ ನಕಲು ಒದಗಿಸಲು ಸೂಚಿಸಿದರು.
ಬಳಿಕ ತಾಲ್ಲೂಕು ಕಚೇರಿ ಕಟ್ಟಡದ ದುರಸ್ಥಿ ಕೆಲಸದ ಬಗ್ಗೆ ಪರಿಶೀಲನೆ ನಡೆಸಿದರು. ನೂತನವಾಗಿ ತಹಸಿಲ್ದಾರ್ ಪರಶುರಾಮ ಅವರು ಬಂದಿದ್ದಾರೆ. ಅವರು ಎಲ್ಲಾ ರೀತಿಯ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುತ್ತಾರೆ ಎಂದು ಸಾರ್ವಜನಿಕರಿಗೆ ತಿಳಿಸಿದರು.





