ಮಂಡ್ಯ: ಹೊಸ ಪೀಳಿಗೆಯು ಸಂವಿಧಾನದ ಬಗ್ಗೆ ಪ್ರಜ್ಞೆ ಬೆಳೆಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಾದಿದೆ ಎಂದು ಕೃಷಿ ಸಚಿವ ಎನ್. ಚೆಲುವನಾರಾಯಣ ಸ್ವಾಮಿ ಹೇಳಿದ್ದಾರೆ.
75ನೇ ಸಂವಿಧಾನ ಅಮೃತ ಮಹೋತ್ಸವ ಆಚರಣೆ ಮತ್ತು ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದ ಹಿತ ದೃಷ್ಟಿಯಿಂದ ನಾವು ಸಾರ್ವಜನಿಕರನ್ನ, ಮಹಿಳೆಯರನ್ನ, ಯುವಕರನ್ನ ಭಾರತ ದೇಶದ ಇತಿಹಾಸದತ್ತ ತಿರುಗಿಸಬೇಕಿದೆ ಎಂದು ನುಡಿದರು.
ನಮ್ಮ ಕಾಲ ಮುಗಿಯುತ್ತ ಬಂದಿದೆ ನಮ್ಮ ಹಿಂದೆ ಬರುವಂತಹ ಹೊಸ ಪೀಳಿಗೆಗೆ ಅನಾಹುತ ಕಾದಿದೆ ಆದ್ದರಿಂದ ಸಂವಿಧಾನದ ಪ್ರಜ್ಞೆ ಹೆಚ್ಚಿಸಿಕೊಳ್ಳಬೇಕು. ಈ ದೇಶದ ಸಂವಿಧಾನ ಬಹಳ ಮುಖ್ಯ ಬಹು:ಶ ಎಲ್ಲಾ ಗ್ರಂಥಗಳಿಗಿಂತಲೂ ಶ್ರೇಷ್ಠವಾಗಿದೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ನಾಗರಿಕರಿಗೂ ಶಕ್ತಿ ತುಂಬುವ ಗ್ರಂಥ ಸಂವಿಧಾನವಾಗಿದೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ ನಂತರ ಸಂವಿಧಾನ ದಲಿತರಿಗೆ ಮಾತ್ರ ಸಂಬಂಧಪಟ್ಟದ್ದು ಎಂದು ತಿಳಿದುಕೊಳ್ಳುವುದು ತಪ್ಪಾಗುತ್ತದೆ. ಸಾರ್ವಜನಿಕರು ಮತ್ತು ಅತ್ಯಂತ ಕಡು ಬಡವರು ಯಾವುದೇ ಹಣಬಲ ಜನ ಬಲ ಅಧಿಕಾರ ಬಲ ಇಲ್ಲದಿದ್ದರೂ ತೊಡೆತಟ್ಟಲು ಶಕ್ತಿ ತುಂಬುವುದು ಸಂವಿಧಾನ ಎಂದು ಹೇಳಿದರು.
ಏನೂ ಇಲ್ಲದಂತಹ ಒಬ್ಬ ಸಾಮಾನ್ಯ ವ್ಯಕ್ತಿಯು ತನ್ನ ಘನತೆ ವಿಶ್ವಾಸ ಗೌರವ ಸ್ವಾಭಿಮಾನಕ್ಕೆ ಧಕ್ಕೆ ಆದರೆ ಗಟ್ಟಿಯಾಗಿ ಧ್ವನಿ ಎತ್ತಲು ಶಕ್ತಿ ತುಂಬುವುದು ಸಂವಿಧಾನವಾಗಿದೆ ಇಂತಹ ಸಂವಿಧಾನವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಸಮರ್ಪಿಸುವುದು ಅವಶ್ಯವಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಚಿವರು ಮತ್ತು ಶಾಸಕರಾದ ರವಿಕುಮಾರ್ ಗೌಡ ಮತ್ತು ದಿನೇಶ್ ಗೂಳಿಗೌಡ ಹಾಗೂ ಕಾಂಗ್ರೆಸ್ ನಾಯಕ ಸ್ಟಾರ್ ಚಂದ್ರು ಸೇರಿದಂತೆ ಹಲವರು ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದರು.