Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಶೀಘ್ರದಲ್ಲೇ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ: ಪಿ ರವಿಕುಮಾರ್

ಮಂಡ್ಯ: ಪೌರ ಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಸದಾ ಸಿದ್ದವಿದ್ದು, ಶೀಘ್ರದಲ್ಲೇ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಮಂಡ್ಯ ವಿಧಾನಸಭಾ ಶಾಸಕ ಪಿ ರವಿಕುಮಾರ್ ಹೇಳಿದರು.

ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಹಾಗೂ ಶ್ರಮಜೀವಿ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹಲವು ದಿನಗಳ ಬೇಡಿಕೆಯಾದ ಪೌರಕಾರ್ಮಿಕರ ನೇರ ವೇತನ ಪಾವತಿ ಸಂಬಂಧ ಕಡತ ಈಗಾಗಲೇ ಸರ್ಕಾರದ ಮುಂದಿದ್ದು, ಶೀಘ್ರದಲ್ಲೆ ಈ ಸಮಸ್ಯೆಗೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೌರ ಕಾರ್ಮಿಕರಿಲ್ಲದೇ ಹೋದರೆ ನಗರವನ್ನು ಸ್ವಚ್ಛತೆಯಿಂದಿಡಲು ಸಾಧ್ಯವಿಲ್ಲ. ಕೊರೊನಾ ಸಂದರ್ಭದಲ್ಲಿ ಪೌರ ಕಾರ್ಮಿಕರು ಮಾಡಿದ ಸೇವೆಯನ್ನು ಇಡೀ ದೇಶ ನೋಡಿದೆ. ಪೌರ ಕಾರ್ಮಿಕರ ಸೇವೆ ಶ್ಲಾಘನೀಯವಾದುದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸರ್ಕಾರಗಳು ನಿಮ್ಮ ಸೇವೆ ಗುರುತಿಸಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

5000 ಮನೆಗಳ ನಿರ್ಮಾಣಕ್ಕೆ ಗುರಿ:

ಸೂರು ಇಲ್ಲದೆ ಇರುವವರಿಗೆ ಮಂಡ್ಯದಲ್ಲಿ 5000 ಮನೆಗಳ ನಿರ್ಮಾಣ ಮಾಡಲು ಗುರಿ ಹೊಂದಲಾಗಿದ್ದು, ಈಗಾಗಲೇ 600 ಮನೆಗಳನ್ನು ನಿರ್ಮಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಶೀಘ್ರದಲ್ಲೇ ಹಂಚಿಕೆ ಮಾಡಲಾಗುವುದು. ಮಂಡ್ಯ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಅಥವಾ ಖಾಸಗಿ ಜಾಗ ಖರೀದಿಸಿ ಉಳಿದ ೪೪೦೦ ಮನೆಗಳನ್ನು ಹಂತ ಹಂತವಾಗಿ ನಿರ್ಮಿಸಿ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಹಕ್ಕುಪತ್ರ ವಿತರಣೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು. ಈಗಾಗಲೇ ಹಾಲಹಳ್ಳಿ ಸ್ಲಂ ನಿವಾಸಿಗಳಿಗೆ 700 ಮಂದಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. 15 ದಿನದೊಳಗೆ ನಗರದ ಆರ್.ಟಿ.ಒ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದರು.

ಮೂರುವರೇ ವರ್ಷದಲ್ಲಿ ಯಾರೊಬ್ಬರೂ ಹಕ್ಕುಪತ್ರದಿಂದ ವಂಚಿತರಾಗಬಾರದು ಆ ನಿಟ್ಟಿನಲ್ಲಿ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಲಂ ನಿವಾಸಿಗಳಿಗೆ ಕೊಳಚೆ ನಿರ್ಮೂಲನ ಮಂಡಳಿಯಿಂದ ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ 203:ಮನೆಗಳ ಕಾಮಗಾರಿ ಶೇ.10 ರಷ್ಟು ಮುಗಿದಿದ್ದು, ಉಳಿದ ಶೇ.10 ರಷ್ಟು ಕಾಮಗಾರಿ ಪೂರ್ಣಗೊಳ್ಳಲು ಫಲಾನುಭವಿಗಳು ಸ್ಲಂ ಬೋರ್ಡ್ಗೆ 47,000 ಹಣ ಪಾವತಿ ಮಾಡಬೇಕು ಎಂದರು.

ಒಂದು ದಿನದ ಪ್ರವಾಸ ಭಾಗ್ಯ ನಗರ ಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ 250 ಮಂದಿಗೆ ನನ್ನ ಸ್ವಂತ ಖರ್ಚಿನಲ್ಲಿ ಮೂರು ಹಂತಗಳಲ್ಲಿ ಒಂದು ದಿನದ ಪ್ರವಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಪೌರ ಕಾರ್ಮಿಕರನ್ನು ಮಾತೃ ಹೃದಯದಿಂದ ಕಾಣಬೇಕು:ಡಾ ಕುಮಾರ

ಪ್ರತಿಯೊಬ್ಬರೂ ಕೂಡ ಪೌರ ಕಾರ್ಮಿಕರ ಬಗ್ಗೆ ಅಪಾರವಾದಂತಹ ಗೌರವವನ್ನು ಇಟ್ಟುಕೊಳ್ಳಬೇಕು. ಜೊತೆಗೆ ಅವರನ್ನು ಮಾತೃ ಹೃದಯದಿಂದ ನೋಡಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಹೇಳಿದರು.

ಪ್ರತಿಯೊಂದು ವೃತ್ತಿಗೂ ಕೂಡ ಅದರದ್ದೇ ಆದ ಘನತೆ, ಗೌರವ, ಮಹತ್ವ, ಪ್ರಾಮುಖ್ಯತೆ ಇರುತ್ತದೆ. ಅದರಲ್ಲಿ ವಿಶೇಷವಾಗಿ ಪೌರ ಕಾರ್ಮಿಕರ ವೃತ್ತಿಯು ವಿಶೇಷವಾಗಿದ್ದು, ಇವರ ಕೆಲಸವನ್ನ ಯಾವ ವಿಧದಲ್ಲೂ ಅಳೆಯಲಿಕ್ಕೆ ಸಾಧ್ಯವಿಲ್ಲ.ಅವರ ಮೇಲೆ ವಿಶೇಷ ಕಾಳಜಿ, ಪ್ರೀತಿಯಿಂದ ಕಾಣಬೇಕು. ವಿಶೇಷ ಗೌರವಕ್ಕೆ ಪಾತ್ರರಾದವರು ಪೌರ ಕಾರ್ಮಿಕರು  ಎಂದರು.

ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಪೌರ ಕಾರ್ಮಿಕರ ಪರಿಶ್ರಮ ಅಗತ್ಯವಾಗಿದೆ. ಪೌರ ಕಾರ್ಮಿಕ ವೃತ್ತಿಯಲ್ಲಿ ತಮ್ಮದೇ ಆದ ಸವಾಲುಗಳಿದ್ದು, ಸೂರ್ಯ ಉದಯಿಸುವ ಮುನ್ನವೇ ನಗರವನ್ನು ಸ್ವಚ್ಛ ಮಾಡುವ ಕೆಲಸ ಮಾಡುವ ನಿಮ್ಮ ಸಾಮಾಜಿಕ ಕಳಕಳಿಯನ್ನು ಮೆಚ್ಚುವಂತದ್ದು ಎಂದರು.

ಯಾರಲ್ಲಿ ಸ್ವಚ್ಛ ಮನಸ್ಸಿರುತ್ತದೆಯೋ ಅವರಿಗೆ ಮಾತ್ರ ಸ್ವಚ್ಛ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಮನೋಭಾವವನ್ನು ಹೊಂದಿರುತ್ತಾರೆ. ಹಾಗಾಗಿ ನಿಮ್ಮೆಲ್ಲರಲ್ಲೂ ಕೂಡ ಸ್ವಚ್ಛ ಮನಸ್ಸು ಇರುವುದರಿಂದ ನೀವು ಸಮಾಜವನ್ನು ಸ್ವಚ್ಛಗೊಳಿಸುತ್ತಿದ್ದೀರ ಎಂದು ಪೌರ ಕಾರ್ಮಿಕರಿಗೆ ಅಭಿನಂದನೆಗಳನ್ನು ತಿಳಿಸಿದರು.

ಪೌರ ಕಾರ್ಮಿಕರು ನಿಮ್ಮ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡಬೇಕು. ಪೌರ ಕಾರ್ಮಿಕರ ಮಕ್ಕಳು ಪೌರ ಕಾರ್ಮಿಕರಾಗಬೇಕು ಎಂಬ ಮನೋಭಾವನೆಯನ್ನು ತೊರೆಯಬೇಕು. ಸಮಾಜದಲ್ಲಿ ಒಳ್ಳೆಯ ಶಿಕ್ಷಣ, ಒಳ್ಳೆಯ ಹುದ್ದೆಯನ್ನು ಅಲಂಕರಿಸಬೇಕು ಎಂದರು.

ಪೌರ ಕಾರ್ಮಿಕರು ಸಮಾಜವನ್ನು ಸ್ವಚ್ಛಗೊಳಿಸುವ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ಒಳ್ಳೆಯ ಆರೋಗ್ಯ, ಹವ್ಯಾಸವನ್ನು ರೂಢಿಸಿಕೊಳ್ಳಿ. ನೀವು ಆರೋಗ್ಯವಾಗಿದ್ದರೆ, ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬಹುದು. ಆದ್ದರಿಂದ ಸದೃಢ ದೇಹ, ಸದೃಢ ಮನಸ್ಸನ್ನು ಹೊಂದಿರುವುದು ಅಗತ್ಯ. ನೀವು ನಿರ್ಲಕ್ಷ ಭಾವವನ್ನು ತಾಳದೆ ನಿಮ್ಮ ಕುಟುಂಬದ ಏಳಿಗೆಗಾಗಿ ಶ್ರಮಿಸಬೇಕು ಎಂದರು.

ಪೌರಕಾರ್ಮಿಕರ ಗೃಹಭಾಗ್ಯ ಮತ್ತು ಸಂಕಷ್ಟ ಭತ್ಯೆ ಯೋಜನೆ ಸರ್ಕಾರದಿಂದ ಪೌರಕಾರ್ಮಿಕರ ಮನೆ ನಿರ್ಮಾಣಕ್ಕಾಗಿ ರೂ. 7. ಲಕ್ಷ ಹಣವನ್ನು ನೀಡಲಾಗುತ್ತಿದೆ. ಈಗಾಗಲೇ ಈ ಯೋಜನೆಯಡಿಯಲ್ಲಿ ಒಟ್ಟು 88 ಮನೆಗಳು ನಿರ್ಮಾಣವಾಗಿದ್ದು, 16 ಮನೆಗಳ ನಿರ್ಮಾಣ ನಡೆಯುತ್ತಿದೆ. ಅರ್ಹ ಪೌರ ಕಾರ್ಮಿಕರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ. ಖಾಯಂ ಪೌರ ಕಾರ್ಮಿಕರಿಗೆ ರೂ 3,000 ಸಂಕಷ್ಟ ಭತ್ಯೆಯನ್ನು ನೀಡಲಾಗುತ್ತದೆ. ಹೊರಗುತ್ತಿಗೆ ನೌಕರರಿಗೂ ಕೂಡ ಸಂಕಷ್ಟ ಭತ್ಯೆ ನೀಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜೊತೆಗೆ ಖಾಲಿಯಿರುವ ಪೌರ ಕಾರ್ಮಿಕ ಹುದ್ದೆಯನ್ನು ಭರ್ತಿ ಮಾಡಲು ಬೇಡಿಕೆ ಇದ್ದು, ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಎಲ್ಲಾ ಪೌರ ಕಾರ್ಮಿಕರು ರಾಷ್ಟ್ರ ಕವಿ ಕುವೆಂಪು ಅವರು ಬರೆದಿರುವ ಜಲಗಾರ ಎಂಬ ನಾಟಕವನ್ನು ಓದಬೇಕು. ಕುವೆಂಪುರವರು ಅದರಲ್ಲಿ ಇಡೀ ಸಮಾಜವನ್ನು ಸ್ವಚ್ಛಗೊಳಿಸುವವರು ಕೆಲಸ ಹಾಗೂ ಇಡೀ ಜಗತ್ತನ್ನು ಕಾಯುವ ದೇವರು ಶಿವನ ಕೆಲಸಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಪೌರ ಕಾರ್ಮಿಕರು ಮೊದಲ ಗೌರವಕ್ಕೆ ಪಾತ್ರರಾಗುತ್ತೀರ ಎಂದರು.

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ: ಪ್ರಕಾಶ್
ಪೌರ ಕಾರ್ಮಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಆಗ ಮಾತ್ರ ನಗರ ಸುಂದರವಾಗಿ ಕಾಣಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಪ್ರಕಾಶ್ ಅಭಿಪ್ರಾಯಪಟ್ಟರು.

ಪ್ರತಿ ದಿನ ಬೆಳಗಿನ ಜಾವ ಸ್ವಚ್ಛತೆಗೆ ತೆರಳಿದಾಗ ಹೊಟೇಲ್ ಹಾಗೂ ಟೀ ಅಂಗಡಿಗಳಲ್ಲಿ ಬಳಸುವ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಮಂಡ್ಯ ನಗರಸಭೆಯಲ್ಲಿ ೪೦ ರಿಂದ ೫೦ ಪೌರಕಾರ್ಮಿಕ ಹುದ್ದೆಗಳು ಖಾಲಿ ಇವೆ. ಆ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾಡಳಿತ ಕ್ರಮ ವಹಿಸಬೇಕು. ಹಾಗೇಯೇ ಹೊರಗುತ್ತಿಗೆ ನೌಕರರನ್ನು ಖಾಯಂ ಗೊಳಿಸಬೇಕು ಎಂಬ ಬೇಡಿಕೆಯನ್ನಿಟ್ಟರು.

ಪೌರ ಕಾರ್ಮಿಕರ ಕ್ಷೇಮಾನಿಧಿಗೆ 2 ಲಕ್ಷ ನೆರವು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ತುಷಾರಮಣಿ ತಮ್ಮ ತಂದೆ ತಾಯಿ ಶಕುಂತಲಾ ವೀರಪ್ಪ ಅವರ ಹೆಸರಿನಲ್ಲಿ ಪೌರಕಾರ್ಮಿಕರ ಕ್ಷೇಮಾನಿಧಿಗೆ ವ್ಯಯಕ್ತಿಕವಾಗಿ 2 ಲಕ್ಷ ರೂ. ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲಿರುವ ಗಣ್ಯರನ್ನು ಗೌರವಿಸಲಾಯಿತು.

ತದನಂತರ ಶ್ರಮಜೀವಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜೊತೆಗೆ ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಜಾಗೃತಿ ಜಾಥಾ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಗರಸಭೆಯಿಂದ ವಿವಿ ರಸ್ತೆ, ಆರ್.ಪಿ. ರಸ್ತೆ ಮೂಲಕ ಅಂಬೇಡ್ಕರ್ ಭವನದವರೆಗೂ ಪೂಜಾ ಕುಣಿತ, ನಗಾರಿ, ಡೊಳ್ಳುಕುಣಿತದೊಂದಿಗೆ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ನಗರಸಭೆ ಅಧ್ಯಕ್ಷ ಪ್ರಕಾಶ್ (ನಾಗೇಶ್) ಜಾಥಾಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಅಸಿಫ್, ಮಂಡ್ಯ ನಗರಸಭೆಯ ಉಪಾಧ್ಯಕ್ಷ ಅರುಣ್ ಕುಮಾರ್, ಮಾಜಿ ಅಧ್ಯಕ್ಷ ಎಂ ಎಸ್ ಮಂಜು, ನಗರಾಭಿವೃದ್ದಿ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ ಬಿ ನಾಗಣ್ಣಗೌಡ, ನಗರಸಭೆ ಆಯುಕ್ತ ಕೃಷ್ಣಕುಮಾರ್, ನಗರಸಭೆ ಎಂಜಿನಿಯರ್‌ಗಳಾದ ರುದ್ರೇಗೌಡ, ನಗರಸಭೆ ಸದಸ್ಯರುಗಳಾದ ಮಂಜುಳಾ, ಮೀನಾಕ್ಷಿ, ಶ್ರೀಧರ್, ರವಿಕುಮಾರ್, ಪುಟ್ಟಸ್ವಾಮಿ, ಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: