. ಮಂಡ್ಯ : ಮತ್ತೊಮ್ಮೆ ಕ್ರೆಡಿಟ್ ಪಾಲಿಟಿಕ್ಸ್ ಆರಂಭಗೊಂಡಿದೆ. ಲೈಂಗಿಕ ದೌರ್ಜನ್ಯದಿಂದ ಮೃತಪಟ್ಟ ಮಳವಳ್ಳಿಯ ಬಾಲಕಿ ಕುಟುಂಬಕ್ಕೆ ನೆರವು ಕೊಡಿಸುವ ವಿಚಾರದ ಕ್ರೆಡಿಟ್ ತೆಗೆದುಕೊಳ್ಳಲು ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಶಾಸಕ ಅನ್ನದಾನಿ ಅವರ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. ನಾನು ಮನವಿ ಮಾಡಿಕೊಂಡಿದ್ದರಿಂದ ಸಿಎಂ ಬಸವರಾಜ್ ಬೊಮ್ಮಾಯಿ ಬಾಲಕಿಯ ಕುಟುಂಬಕ್ಕೆ ನೆರವು ನೀಡಿದ್ದಾರೆ ಎಂದು ಶಾಸಕ ಅನ್ನದಾನಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಗೆ ಸುಮಲತಾ ಅಂಬರೀಶ್ ಬೆಂಬಲಿಗರು ಅಸಮಾಧಾನ ಹೊರ ಹಾಕಿದ್ದಾರೆ.
ಬಾಲಕಿ ಮೃತಪಟ್ಟ ದಿನದಿಂದಲೂ ಸುಮ್ಮನಿದ್ದ ಅನ್ನದಾನಿ ಈಗ ಕ್ರೆಡಿಟ್ ಪಡೆಯಲು ಮುಂದಾಗಿದ್ದಾರೆ. ಸುಮಲತಾ ಅಂಬರೀಶ್ ಅವರು ಸಿಎಂ ಬಳಿ ಮಾತನಾಡಿದ ಬಳಿಕ ಹತ್ತು ಲಕ್ಷ ಹಣ ನೀಡಲಾಗಿದೆ. ಶಾಸಕ ಅನ್ನದಾನಿ ಇದರ ಕ್ರೆಡಿಟ್ ಪಡೆಯಲು ಹೋಗಿ ಜನಗಳ ಮುಂದೆ ಮುಖಭಂಗ ಅನುಭವಿಸಿದ್ದಾರೆ ಎಂದು ಸಂಸದರ ಬೆಂಬಲಿಗ ಬೇಲೂರು ಸೋಮಶೇಖರ್ ಆಕ್ರೋಶ ಹೊರ ಹಾಕಿದ್ದಾರೆ.
ಬಾಲಕಿ ಮೃತಪಟ್ಟ ದಿನದಂದು 25 ಲಕ್ಷ ನೆರವು ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದಾಗಿ ಅನ್ನದಾನಿ ಹೇಳಿದ್ದಾರೆ. ಇತ್ತ ಸುಮಲತಾ ಅಂಬರೀಶ್, ಸಿಎಂ ಬಳಿ ನಾನು ಮನವಿ ಮಾಡಿದ್ದರಿಂದ ತಕ್ಷಣ ನೆರವು ಘೋಷಣೆ ಮಾಡಿದರು ಎಂದು ಹೇಳುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.