ಮಂಡ್ಯ : ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು ಹವಾಮಾನ ಇಲಾಖೆಯ ವರದಿಯ ಪ್ರಕಾರ ಇನ್ನೂ ಮೂರು ಅಥವ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ವಿಪತ್ತು ನಿರ್ವಹಣೆಯ ಕುರಿತು ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.
ಗುರುವಾರ (ಅ.23) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ಜಲಾಶಯದಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ 4600 ಕ್ಯೂಸೆಕ್ ನೀರು ಬಿಡಲಾಗಿದೆ, ಕಾವೇರಿ ನದಿಪಾತ್ರದಲ್ಲಿ ವಿಪತ್ತು ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ಬಾರಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಕೆ.ಎಚ್. ಬಿ ಕಾಲೋನಿ ನೀರು ನುಗ್ಗಿದ್ದು , ಸಿ.ಡಿ.ಎಸ್ ನಾಲೆ ಹೊಡೆದು ಹೋಗಿತ್ತು ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸದರಿ ಸ್ಥಳಗಳಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರ ಪರಿಹಾರಕ್ಕೆ ಪರಿಹಾರ ತಂತ್ರಾಂಶದಲ್ಲಿ ಅಗತ್ಯ ಮಾಹಿತಿ ಒದಗಿಸಿ. ಯಾವುದೇ ಕಾರಣಕ್ಕೂ ಒಬ್ಬ ಸಂತ್ರಸ್ತರನ್ನು ಪರಿಹಾರದ ಪಟ್ಟಿಯಿಂದ ಕೈಬಿಡುವಂತಿಲ್ಲ, ಸಂಬಂಧಪಟ್ಟ ತಹಶೀಲ್ದಾರ್ ಗಳು ಹಾನಿಗೊಳಗದವರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹಾರವನ್ನು ಶ್ರೀಘ್ರವಾಗಿ ಕೊಡಿಸಿ ಎಂದು ತಿಳಿಸಿದರು.
ಇದನ್ನು ಓದಿ: ಧಾರಾಕಾರ ಮಳೆಗೆ ಗೋಡೆ ಕುಸಿತ
ಕೆ.ಎಚ್.ಬಿ ಕಾಲೋನಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆ ಇರುವುದರಿಂದ ಕೆ.ಎಚ್.ಬಿ ಕಾಲೋನಿಗೆ ನೀರು ನುಗ್ಗಿದರೆ ನೇರವಾಗಿ ಅಧಿಕಾರಿಗಳೇ ಹೊಣೆ, ಮಳೆಯಿಂದಾಗಿ ಕೆ.ಆರ್ ಪೇಟೆಯ 24 ಶಾಲೆಗಳಿಗೆ ಹಾನಿಯಾಗಿದೆ ಎಂದು ವರದಿ ನೀಡಲಾಗಿದೆ, ತಹಶೀಲ್ದಾರ್ ಖುದ್ದಾಗಿ 24 ಶಾಲೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದರು.
ನಾಗಮಂಗಲ ಕೆ.ಎಸ್.ಆರ್.ಟಿ. ಸಿ ಬಸ್ ನಿಲ್ದಾಣದಲ್ಲಿ ನೀರು ನಿಲ್ಲದಂತೆ ದುರಸ್ತಿ ಮಾಡಲು ಟೆಂಡರ್ ಕರೆಯಲಾಗಿತ್ತು, ಈಗಾಗಲೇ ಶೇ 25 ರಷ್ಟು ಕಾಮಗಾರಿ ಪೂರ್ಣಗೊಂಡಿದೆ, ಉಳಿದ ಕಾಮಗಾರಿಯನ್ನು ತಿಂಗಳೊಳಗೆ ಮುಗಿಸಬೇಕು. ಎಣ್ಣೆಹೊಳೆ ಕೊಪ್ಪಲು ತಡೆಗೊಡೆ ಕಾಮಗಾರಿಯೂ ಶೇ 50 ರಷ್ಟು ಮುಗಿದಿದೆ. ಸಂಬಂಧ ಪಟ್ಟ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕಳೆದ 23 ದಿನಗಳಲ್ಲಿ 74 ಮನೆಗಳು ಹಾನಿಗೊಳಗಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಮನೆಹಾನಿಯನ್ನು ಪ್ರಮುಖವಾಗಿ ಪರಿಗಣಿಸಿ ಅಗತ್ಯ ಕ್ರಮ ಜರುಗಿಸಿ, ಈಗಾಗಲೇ ತಹಶೀಲ್ದಾರ್ ಗಳ ಖಾತೆ ಹಣ ವರ್ಗಾವಣೆ ಮಾಡಲಾಗಿದೆ, ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದ ತಾಕೀತು ಮಾಡಿದರು.
ಬೆಳೆ ಸಮೀಕ್ಷೆ
ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಮಾಡಲು ಅಕ್ಟೋಬರ್ 24 ಕೊನೆಯ ದಿನವಾಗಿತ್ತು ಆದರೆ ಮಳೆಯ ಹಿನ್ನೆಲೆ ಅಕ್ಟೋಬರ್ 26 ರವರಿಗೆ ಬೆಳೆ ಸಮೀಕ್ಷೆ ದಿನಾಂಕವನ್ನು ವಿಸ್ತಾರಿಸಲಾಗಿದೆ, ಅಕ್ಟೋಬರ್ 26 ರೊಳಗಾಗಿ ಬೆಳೆ ಸಮೀಕ್ಷೆ ಕಡ್ಡಾಯವಾಗಿ ಮುಗಿಸಬೇಕು, ಮಳವಳ್ಳಿ ಹಾಗೂ ಶ್ರೀರಂಗಪಟ್ಟಣ ಬೆಳೆ ಸಮೀಕ್ಷೆಯಲ್ಲಿ ಹಿಂದುಳಿದಿದೆ ಅಧಿಕಾರಿಗಳು ತಮ್ಮ ಕಾರ್ಯ ದಕ್ಷತೆ ಹೆಚ್ಚಿಸಿ ಕಾರ್ಯ ನಿರ್ವಹಿಸಿ, ಅಕ್ಟೋಬರ್ 26 ರೊಳಗಾಗಿ ಬೆಳೆ ಸಮೀಕ್ಷೆ ಮುಗಿಯದಿದ್ದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಕ್ಟೋಬರ್ 28 ಎನ್ ಡಿ ಆರ್ ಎಫ್ ತಂಡದಿಂದ ಅಣುಕು ಪ್ರದರ್ಶನ
ಅಕ್ಟೋಬರ್ 28 ರಂದು ಎನ್ ಡಿ ಆರ್ ಎಫ್ 25 ಜನರ ತಂಡದಿಂದ ಜಿಲ್ಲೆಯ ತೋರೆಕಾಡನಹಳ್ಳಿಯಲ್ಲಿ ರಾಸಾಯನಿಕ ವಿಪತ್ತು ನಿರ್ವಹಣೆಯ ಕುರಿತಾಗಿ ಅಣುಕು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಮಂಡ್ಯ ಉಪವಿಭಾಗದ ಉಪಕೃಷಿ ನಿರ್ದೇಶಕರಾದ ಮುನೇಗೌಡ, ವಿಪತ್ತು ನಿರ್ವಹಣೆಯ ವಿಭಾಗದ ಪುನೀತ್, ಆರ್ ಸಿ ಎಚ್ ಅಧಿಕಾರಿ ಡಾ. ಕೆ. ಪಿ ಅಶ್ವತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





