ಮಂಡ್ಯ : ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ನಾಲೆಗೆ ಜಾರಿ ಬಿದ್ದು ಬಾಲಕನೊಬ್ಬ ಸಾವಿಗೀಡಾಗಿರುವ ಘಟನೆ ಎಚ್.ಮಲ್ಲಿಗೆರೆ ಫಾರಂ ಬಳಿಯ ವಿಶ್ವೇಶ್ವರಯ್ಯ ನಾಲೆಯಲ್ಲಿ ಸಂಭವಿಸಿದೆ.
ಮೂಲತಃ ಹೊನಗಾನಹಳ್ಳಿ ಗ್ರಾಮದ ಸುರೇಶ್-ವಿದ್ಯಾ ದಂಪತಿ ಪುತ್ರ ದುಷ್ಯಂತ್ ಗೌಡ (೧೦) ಮೃತಪಟ್ಟ ಬಾಲಕ.
ಗೊರವಾಲೆಯ ದೊಡ್ಡಪ್ಪನ ಮನೆಗೆ ಹಬ್ಬಕ್ಕೆ ತೆರಳಿದ್ದ ಬಾಲಕ ಗೆಳೆಯರೊಂದಿಗೆ ಸೋಮವಾರ ಮಧ್ಯಾಹ್ನ ಮಲ್ಲಿಗೆರೆ ಫಾರಂ ಬಳಿಯ ನಾಲೆಯಲ್ಲಿ ಆಟವಾಡುತ್ತಿದ್ದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿ ಕೊಚ್ಚಿ ಹೋಗಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೃತ ದೇಹ ಮಂಗಳವಾರ ಮಧ್ಯಾಹ್ನ ಬಿ.ಹೊಸೂರು ಬಳಿಯ ವಿದ್ಯುತ್ ತಯಾರಿಕಾ ಘಟಕದ ಬಳಿ ಪತ್ತೆಯಾಗಿದೆ.ಬಳಿಕ ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸಲಾಯಿತು. ಜಿಲ್ಲಾಸ್ಪತ್ರೆಗೆ ಆಗಮಿಸಿದ ಶಾಸಕ ಎಂ.ಶ್ರೀನಿವಾಸ್ ಬಾಲಕನ ಪೋಷಕರಿಗೆ ಸಾಂತ್ವನ ಹೇಳಿದರು.ಇನ್ನು ಘಟನೆಯ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.