Mysore
31
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಮಂಡ್ಯ :ಮಹಿಳೆಯರಿಬ್ಬರ ದೇಹಗಳನ್ನು ತುಂಡರಿಸಿ ಬಿಸಾಡಿದ್ದ ಪ್ರಕರಣ, ಓರ್ವ ಮಹಿಳೆ ಸೇರಿ ಇಬ್ಬರ ಬಂಧನ

ಮಂಡ್ಯ : ಇಬ್ಬರು ಮಹಿಳೆಯರ ದೇಹಗಳನ್ನು ಕತ್ತರಿಸಿ ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಬಿಸಾಡಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮನಗರ ಜಿಲ್ಲೆಯ ವಾಗಡಿ ತಾಲ್ಲೂಕಿನ ಕುದೂರು ಹೋಬಳಿ ಕೋಡಿಹಳ್ಳಿ ಕಾಲೋನಿಯ ವ್ಯಕ್ತಿ ಮತ್ತು ಪಾಂಡವಪುರ ತಾಲ್ಲೂಕಿನ ಹರವು ಗ್ರಾಮದ ಮಹಿಳೆಯನ್ನು ಬಂಧಿಸಲಾಗಿದೆ. ಇವರು ಮೂರು ಕೊಲೆಗಳನ್ನು ಮಾಡಿದ್ದು ಮತ್ತೆ 5 ಕೊಲೆಗಳಿಗೆ ಸಂಚು ರೂಪಿಸಿದ್ದರು ಎಂದು ಮೈಸೂರು ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಣಕಾಸಿನ ವ್ಯವಹಾರ, ವೈಯಕ್ತಿಕ ದ್ವೇಷ, ಅಕ್ರಮ ಲಾಭಕ್ಕಾಗಿ ಆರೋಪಿಗಳಿಬ್ಬರು ಈ ಕೊಲೆಗಳನ್ನು ಮಾಡಿದ್ದಾರೆ. ಕೊಲೆಯಾದ ಮಹಿಳೆಯರಿಬ್ಬರು ಆರೋಪಿಗಳಿಗೆ ಹಿಂದೆಯೇ ಪರಿಚಯವಿದ್ದು ಗಾರ್ಮೆಂಟ್ಸ್ ಮತ್ತು ನರ್ಸಿಂಗ್ ಹೋಮ್ ಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಬ್ಬರನ್ನು ಮೇಟಗಳ್ಳಿಯ ಬಾಡಿಗೆ ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪಾರ್ವತಿ, ಚಾಮರಾಜನಗರ ಟೌನ್ ನಿವಾಸಿ ಗೀತಾ ಅಲಿಯಾಸ್ ಪುಟ್ಟಿ ಕೊಲೆಯಾದವರು. ಪಾರ್ವತಿಯನ್ನು ಮೇ 30ರಂದು ಗೀತಾಳನ್ನು ಜೂನ್ 3ರಂದು ಕೊಲೆ ಮಾಡಲಾಗಿತ್ತು. ಶವಗಳನ್ನು ಬೈಕ್ಗಳಲ್ಲಿ ಸಾಗಿಸುವುದು ಕಷ್ಟವೆಂಬ ಕಾರಣಕ್ಕೆ ದೇಹಗಳನ್ನು ಅರ್ಧಕ್ಕೆ ತುಂಡರಿಸಿ ಬೇರೆ ಬೇರೆ ಕಡೆಗಳಲ್ಲಿ ಶವಗಳನ್ನು ಬಿಸಾಡಿದ್ದಾರೆ ಎಂದು ವಿವರಿಸಿದರು.

ಪ್ರಕರಣದ ವಿವರ : ಜೂನ್ 7 ರಂದು ಪಾಂಡುಪುರ ತಾಲ್ಲೂಕು ಬೇಬಿ ಗ್ರಾಮದ ಕೆರೆ ಕೋಡಿ ಕಟ್ಟೆಯ ಕೆಳಗೆ ಹರಿಯುವ ನೀರಿನಲ್ಲಿ 30 ರಿಂದ 32 ವರ್ಷದ ವಯಸ್ಸಿನ ಅಪರಿಚಿತ ಮಹಿಳೆ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ವಾಡರಹಳ್ಳಿ ರಸ್ತೆ ಬಳಿ ಸಿಡಿಎಸ್ ನಾಲೆಗೆ ಸಂಪರ್ಕಿಸುವ ಸಾರೋಡುಹಳ್ಳದ ಪಕ್ಕದ ಭತ್ತದ ಗದ್ದೆಯಲ್ಲಿ 40 ರಿಂದ 45 ವರ್ಷ ವಯಸ್ಸಿನ ಮತ್ತೊಬ್ಬ ಅಪರಿಚಿತ ಮಹಿಳೆಯರ ಶವಗಳು ಪತ್ತೆಯಾಗಿದ್ದವು.

ಎರಡು ಪ್ರಕರಣಗಳಲ್ಲಿ ತುಂಡರಿಸಿದ ಇಬ್ಬರು ಮಹಿಳೆಯರ ಅರ್ಧ ದೇಹಗಳು ಮಾತ್ರ ಪತ್ತೆಯಾಗಿದ್ದವು. ಎರಡು ಶವಗಳಲ್ಲಿ ಸೊಂಟದ ಮೇಲ್ಭಾಗದ ದೇಹವೇ ಇರಲಿಲ್ಲ, ಹೀಗಾಗಿ ಶವಗಳ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಪ್ರಕರಣಗಳು ಪೊಲೀಸರಿಗೆ ಸವಾಲಾಗಿದ್ದವು. ಇದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಹತ್ತು ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ಅಕ್ಕ ಪಕ್ಕದ ಜಿಲ್ಲೆಗಳಿಗೆ ಹಂಚಿಕೆ ಮಾಡಿ ಮೃತರ ಗುರುತು ಪತ್ತೆಗಾಗಿ ಜನರು ಮತ್ತು ಪೊಲೀಸರ ಸಹಕಾರ ಕೋರಲಾಗಿತ್ತು.

ಮೂರು ತನಿಕ ತಂಡಗಳನ್ನು ರಚಿಸಿ, ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಲು ಎರಡು ತಾಂತ್ರಿಕ ಪರಿಣಿತ ತಂಡಗಳನ್ನು ರಚಿಸಲಾಗಿತ್ತು. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 1116ಕ್ಕೂ ಹೆಚ್ಚಿನ ಮಹಿಳೆಯರು ಕಾಣೆಯಾದ ಪ್ರಕರಣಗಳನ್ನು ಪರಿಶೀಲನೆ ಮಾಡಲಾಗಿತ್ತು. ಕಡೆಗೆ ಜೂನ್ ಮೂರರಂದು ಗೀತಾ ಕಾಣೆಯಾಗಿದ್ದ ಪ್ರಕರಣವು ಜೂನ್ 7ರಂದು ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಎರಡು ಪ್ರಕರಣಗಳು ಒಂದೇ ರೀತಿ ಸಾಮ್ಯತೆ ಇದ್ದವು. ಹೀಗಾಗಿ ಗೀತಾಳ ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. ವಿಚಾರಣೆ ವೇಳೆ ಬೆಂಗಳೂರಿನಲ್ಲಿ ಕುಮುದಾ ಎಂಬ ಮತ್ತೊಬ್ಬ ಮಹಿಳೆಯನ್ನು ಕೊಲೆ ಮಾಡಿ ಚಿತ್ರದುರ್ಗದವರಿಗೆ ಬೈಕಿನಲ್ಲೇ ಕೊಂಡೊಯ್ದು ಶವ ಬಿಸಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಮಂಡ್ಯದ ಎಸ್ ಪಿ ಎನ್ ಸತೀಶ್, ಅವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಡಿ ವೈ ಎಸ್ ಪಿ ನೇತೃತ್ವದ ತನಿಖಾ ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಪ್ರಕರಣವನ್ನು ಭೇದಿಸಿವೆ. ಹೀಗಾಗಿ ತನಿಕ ತಂಡದಲ್ಲಿದ್ದವರಿಗೆ ಒಂದು ಲಕ್ಷರೂ ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಸತೀಶ್, ಎ ಎಸ್ ಪಿ ವೇಣುಗೋಪಾಲ್, ಶ್ರೀರಂಗಪಟ್ಟಣ ಡಿವೈಎಸ್ಪಿ ಸಂದೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ