ಕುಶಾಲನಗರ: ಮಸೀದಿಯಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿರಾಜಪೇಟೆ ನಗರದ ಸುಣ್ಣದ ಬೀದಿಯ ನಿವಾಸಿಯಾದ ಮಹಮ್ಮದ್ ಶೋಯಬ್(32) ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ. ಕುಶಾಲನಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ಬಡಾವಣೆಯಲ್ಲಿರುವ ಮಸೀದಿಯ ಒಳಗೆ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ಮತ್ತು ಮಸೀದಿಯ ಧ್ವನಿ ವರ್ಧಕಕ್ಕೆ ಅಳವಡಿಸುವ ಆಂಪ್ಲಿಫೈರ್ ಹಾಗೂ ಅದರ ಉಪಕರಣವನ್ನು ಡಿ.19ರಂದು ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದರು.
ಪ್ರಕರಣದ ಆರೋಪಿಗಳ ಪತ್ತೆಯ ಸಲುವಾಗಿ ಸೋಮವಾರಪೇಟೆ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಪಿಐ ಪ್ರಕಾಶ್.ಬಿ.ಜಿ, ಕುಶಾಲನಗರ ನಗರ ಠಾಣೆಯ ಪಿಎಸ್ಐ ಗೀತಾ, ಅಪರಾಧ ಪತ್ತೆ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಇಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಂಧಿತನಿಂದ ಕಳ್ಳತನವಾಗಿದ್ದ ಧ್ವನಿ ವರ್ಧಕಕ್ಕೆ ಅಳವಡಿಸುವ ಒಂದು ಆಂಪ್ಲಿಫೈರ್ ಮತ್ತು ಅದರ ಸಲಕರಣೆಗಳು ಹಾಗೂ ರೂ. 3000 ನಗದನ್ನು ವಶಪಡಿಕೊಳ್ಳಲಾಗಿದೆ.
ಆರೋಪಿಯು ಮಡಿಕೇರಿ ಹಾಗೂ ಪಿರಿಯಾಪಟ್ಟಣದ ಮಸೀದಿಗಳಲ್ಲಿ ಕಳ್ಳತನ ನಡೆಸಿರುವುದು ಕೂಡ ತನಿಖೆಯಲ್ಲಿ ತಿಳಿದುಬಂದಿದೆ. ಇದೆಲ್ಲರ ಜೊತೆಗೆ ಪಿರಿಯಾಪಟ್ಟಣ ಠಾಣೆ ವ್ಯಾಪ್ತಿಯ ಮಸೀದಿಯೊಂದರಲ್ಲಿ ಕಳ್ಳತನ ಮಾಡಿದ್ದ 2 ಆಂಪ್ಲಿಫೈರ್ಗಳು, ಡಿಜಿಟಲ್ ಎಕೋ ರಿವರ್ ಮಿಕ್ಸರ್ & ಮಾನಿಟರ್ ಹಾಗೂ ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿಯೊಂದರಿಂದ ಕಳ್ಳತನ ಮಾಡಿದ ಒಂದು ಆಂಪ್ಲಿಫೈರ್, ಸೌಂಡ್ ಮಿಕ್ಸರ್ ಉಪಕರಣಗಳನ್ನು ಮತ್ತು ಆರೋಪಿಯು ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಸ್ಪಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.