ಕುಶಾಲನಗರ : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಕುಶಾಲನಗರದಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ರಾಷ್ಟ್ರ ರಕ್ಷಣಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಪುನಿತ್ ಕೆರೆಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಶ್ರೀ ಬಸವಲಿಂಗ ಸಿದ್ದಲಿಂಗ ಸ್ವಾಮೀಜಿ ಮಾತನಾಡುತ್ತಿದ್ದ ವೇಳೆ ದಿಢೀರ್ ಆಗಿ ಪ್ರತ್ಯೇಕಗೊಂಡ ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೆಹಳ್ಳಿಯಿಂದ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ವೇದಿಕೆ ಮೇಲಿಂದ ಪುನೀತ್ ಜೈ ಶ್ರೀರಾಮ ಎಂಬ ಘೋಷಣೆ ಕೂಗುತ್ತಿದ್ದಂತೆ ನೆರೆದಿದ್ದ ಪ್ರತಿಭಟನಾಕಾರರು ಕೂಡ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ಇದರಿಂದ ತಬ್ಬಿಬ್ಬುಗೊಂಡ ಪೊಲೀಸರು ಕೆರೆಹಳ್ಳಿಯನ್ನು ವೇದಿಕೆಯಿಂದ ಕೆಳಗಿಸಲು ಮುನ್ನುಗ್ಗಿದರು. ಈ ವೇಳೆ ಗೊಂದಲಮಯ ವಾತಾವರಣ ನಿರ್ಮಾಣವಾಯಿತು.
ಪೊಲೀಸರು ಗಣಪತಿ ದೇವಾಲಯ ವೇದಿಕೆ ಸುತ್ತುವರಿದರು. ಇದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕು ನುಗ್ಗಲು ಉಂಟಾಯಿತು. ಹರಸಾಹಸಪಟ್ಟು ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋದರು. ಕೆರೆಹಳ್ಳಿ ಬಂಧನ ಖಂಡಿಸಿ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ಮಾತಿನ ಚಕಮುಕಿ ನಡೆಯಿತು. ಅನುಮತಿ ಪಡೆಯದೆ ಪುನೀತ್ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿ ಪೊಲೀಸರು ಬಲವಂತವಾಗಿ ಕೆರೆಹಳ್ಳಿಯನ್ನು ಕರೆದುಕೊಂಡು ಹೋದರು. ಕೊಡಗಿನ ಗಡಿಯಾಚೆ ಬೈಲುಕೊಪ್ಪ ಪೊಲೀಸ್ ಠಾಣೆಗೆ ಕೆರೆಹಳ್ಳಿಯನ್ನು ಹಸ್ತಾಂತರಿಸಿದ ಪೊಲೀಸರು ಗಡಿಪಾರು ಮಾಡಿದರು.



