ಮಡಿಕೇರಿ: ಸೂರ್ಲಬ್ಬಿಯಲ್ಲಿ ಮೇ ೯ರಂದು ನಡೆದಿದ್ದ ವಿದ್ಯಾರ್ಥಿನಿಯ ಭೀಕರ ಕೊಲೆ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದು, ಕೊಲೆ ಆರೋಪಿ ಪ್ರಕಾಶ್ ಓಂಕಾರಪ್ಪನನ್ನು ಇಂದು ( ಮೇ 11 ) ಬೆಳಗ್ಗೆ ಬಂಧನ ಮಾಡಲಾಗಿದೆ.
ಬಂಧನಕ್ಕೊಳಗಾದ ಪ್ರಕಾಶ್ ಓಂಕಾರಪ್ಪ ಪೊಲೀಸ್ ವಿಚಾರಣೆ ವೇಳೆ ಹತ್ಯೆಗೀಡಾದ ವಿದ್ಯಾರ್ಥಿನಿ ಯುಎಸ್ ಮೀನಾಳ (16) ರುಂಡವನ್ನು ಪೊದೆಯೊಂದರಲ್ಲಿ ಇಟ್ಟಿದ್ದಾಗಿ ಬಾಯಿಬಿಟ್ಟಿದ್ದಾನೆ. ಆರೋಪಿ ನೀಡಿದ ಮಾಹಿತಿಯ ಅನುಸಾರ ಆತ ಕೃತ್ಯ ಎಸಗಿದ 300 ಮೀಟರ್ ದೂರದ ಪೊದೆಯೊಂದರಲ್ಲಿ ಬಾಲಕಿಯ ರುಂಡ ಪತ್ತೆಯಾಯಿತು. ಯಾವುದೇ ದೊಡ್ಡ ಹಾನಿಯಾಗದ ಸ್ಥಿತಿಯಲ್ಲಿ ತುಂಡರಿಸಿದ ತಲೆಯನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜತೆಗೆ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಮತ್ತು ರಕ್ತಸಿಕ್ತ ಬಟ್ಟೆಗಳನ್ನೂ ಸಹ ವಶಪಡಿಸಿಕೊಂಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
ಮೀನಾಳೊಂದಿಗೆ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ ನಂತರ ನಾನು ಕಂಗಾಲಾದೆ. ಕಾಡಿನಲ್ಲಿ ಆಕೆಯೊಂದಿಗೆ ತೀವ್ರ ವಾಗ್ದಾದಕ್ಕಿಳಿದು ನಂತರ ಕೃತ್ಯ ಎಸಗಿರುವುದಾಗಿ ಆರೋಪಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.