ಮಡಿಕೇರಿ : ಆಟಿ ಪ್ರಯುಕ್ತ ಕೊಡಗು ಜಿಲ್ಲಾ ಬಂಟರ ಸಂಘ, ಕೊಡಗು ಯುವ ಬಂಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಆ. 10ರಂದು ಕಗ್ಗೋಡ್ಲುವಿನಲ್ಲಿ ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ ಎಂದು ಯುವ ಬಂಟ್ಸ್ ಅಸೋಸಿಯೇಷನ್ ಸದಸ್ಯ ಶರತ್ ಕುಮಾರ್ ಶೆಟ್ಟಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ನಗರ ಬಂಟರ ಮಹಿಳಾ ಘಟಕ, ಮಡಿಕೇರಿ ತಾಲ್ಲೂಕು ಬಂಟರ ಮಹಿಳಾ ಘಟಕ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಮಹಿಳಾ ಬಂಟರ ಸಂಘ, ಕಗ್ಗೊಡ್ಲು ಹೋಬಳಿ ಬಂಟರ ಸಂಘದ ಸಹಯೋಗದಲ್ಲಿ ಕಗ್ಗೋಡ್ಲುವಿನಲ್ಲಿರುವ ದಿ.ರಾಮಣ್ಣನವರ ಪತ್ನಿ ಸುಮಲತಾ ಅವರ ಗದ್ದೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ಸಂಜೆ 6 ಗಂಟೆಗೆ ಕಗ್ಗೊಡ್ಲುವಿನ ಅಂಬಾರ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಪುರುಷರಿಗೆ ಹ್ಯಾಂಡ್ ಬಾಲ್ (7+2), ವಿವಿಧ ವಿಭಾಗದಲ್ಲಿ 100 ಮೀ. ಓಟ, ಹಗ್ಗಜಗ್ಗಾಟ, ದಂಪತಿ ಓಟ, ಮಹಿಳೆಯರಿಗೆ 100 ಮೀ. ಓಟ, ಹಗ್ಗಜಗ್ಗಾಟ, ನಿಂಬೆ ಚಮಚ, ಪಾಸಿಂಗ್ ಬಾಲ್ ನಡೆಯಲಿದೆ. ಮಕ್ಕಳಿಗೆ 100 ಮೀ. ಓಟ ಹಾಗೂ ಮನೋರಂಜನಾ ಸ್ಪರ್ಧೆ ನಡೆಯಲಿದೆ. ಅಲ್ಲದೆ ತುಳುನಾಡಿನ ಜಾನಪದ ಕಲೆ, ಆಟಿ ಕಳೆಂಜ ಹಾಗೂ ನಗರ ಮಹಿಳಾ ಘಟಕದಿಂದ ಮಳೆಗಾಲದ ವಿಶೇಷ ಖಾದ್ಯಗಳ ಪ್ರದರ್ಶನ ಗಮನ ಸೆಳೆಯಲಿದೆ ಎಂದರು.
2023-24 ಮತ್ತು 2024-25ನೇ ಸಾಲಿನಲ್ಲಿ ಶೇ.90ರಷ್ಟು ಅಂಕ ಪಡೆದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುವುದು ಎಂದರು.
ಹಗ್ಗಜಗ್ಗಾಟ ಮತ್ತು ಹ್ಯಾಂಡ್ ಬಾಲ್ ಸ್ಪರ್ಧೆಗೆ ಜು.25ರ ಒಳಗೆ ತಂಡಗಳು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9972477982, 9535946519 ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ರೈ ಮಾತನಾಡಿ, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮಡಿಕೇರಿ ತಾಲ್ಲೂಕು ಮಹಿಳಾ ಬಂಟ್ಸ್ ಘಟಕದ ಅಧ್ಯಕ್ಷೆ ಶಶಿಕಲಾ ಲೋಕೇಶ್ ರೈ, ಮಡಿಕೇರಿ ನಗರ ಘಟಕದ ಅಧ್ಯಕ್ಷೆ ಬಿ.ಜೆ.ಬೇಬಿ ಜಯರಾಂ ರೈ, ಬಿ.ಆರ್.ನೀತು ರೈ, ಬಿ.ಜೆ.ಕಮಲಾಕ್ಷಿ ರೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





