ಕೊಡಗು: ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಭಿಮಾನಿಗಳ ನಡುವೆ ಗಲಾಟೆ ಉಂಟಾಗಿ ಚೇರ್ಗಳಲ್ಲಿ ಹೊಡೆದಾಡಿಕೊಂಡ ಘಟನೆ ಜರುಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿ ವೇಳೆ ಅಭಿಮಾನಿಗಳು ಪರಸ್ಪರ ಚೇರ್ಗಳಿಂದ ಹೊಡೆದಾಡಿಕೊಂಡ ಘಟನೆ ತೀವ್ರ ಉದ್ರಿಕ್ತತೆ ಮೂಡಿಸಿತು. ಘಟನೆ ವಿರಾಜಪೇಟೆ ತಾಲ್ಲೂಕಿನ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆದ ಪಂದ್ಯಾವಳಿಯ ಸಂದರ್ಭದಲ್ಲಿ ನಡೆದಿದೆ.
ಕಲ್ಲು ಬಾಯ್ಸ್ ಯುವಕರ ಸಂಘ ಆಯೋಜಿಸಿದ್ದ ಈ ಟೂರ್ನಿಯಲ್ಲಿ ಕಡಂಗ ತಂಡ ಮತ್ತು ಸುಂಟಿಕೊಪ್ಪ ತಂಡ ಭಾಗವಹಿಸಿದ್ದವು. ಸೆಮಿಫೈನಲ್ಸ್ ಪಂದ್ಯದ ವೇಳೆ ಎರಡೂ ತಂಡಗಳ ಅಭಿಮಾನಿಗಳ ನಡುವಿನ ಸಂಭ್ರಮಾಚರಣೆ ಹಂತದಲ್ಲಿ ಉದ್ವಿಗ್ನತೆ ಹೆಚ್ಚಿ, ತಕ್ಷಣವೇ ಗಲಾಟೆಯಾಗಿ ಮಾರ್ಪಟ್ಟಿತು. ಪರಸ್ಪರ ವಾಗ್ವಾದದಿಂದ ಶುರುವಾದ ವಿವಾದ ಚೇರ್ಗಳಿಂದ ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿತು.
ಇದನ್ನು ಓದಿ: ಸ್ನೇಹಿತರ ನಡುವೆ ಹೊಡೆದಾಟ: ಓರ್ವನ ಕೊಲೆಯಲ್ಲಿ ಅಂತ್ಯ
ಘಟನೆ ನಡೆದ ತಕ್ಷಣ ವಿರಾಜಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಯಾವುದೇ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲವಾದರೂ, ಮೈದಾನದಲ್ಲಿ ಕೆಲವು ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈ ಘಟನೆ ವಿರಾಜಪೇಟೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈದಾನದಲ್ಲಿ ಪಂದ್ಯಾವಳಿ ಮುಂದುವರೆದಿದ್ದು, ಆಯೋಜಕರು ಮತ್ತು ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.





