Mysore
19
overcast clouds
Light
Dark

ಕೊಡಗಿನಲ್ಲಿ ಹೈವೇಗೆ ಗುಡ್ಡ ಕುಸಿತದ ಆತಂಕ: ರಸ್ತೆ ಸಂಪರ್ಕಗಳು ಕಡಿತ

ಕೊಡಗು: ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆಯ ಅಬ್ಬರಕ್ಕೆ ಗುಡ್ಡಗಳು ಕುಸಿದು ರಸ್ತೆಗೆ ಬರುತ್ತಿವೆ. ಗುಡ್ಡದ ಮಣ್ಣು ರಸ್ತೆಯನ್ನು ಆವರಿಸಿ ಸಂಚಾರವೇ ದುಸ್ತರವಾಗಿದೆ. ಜೊತೆಗೆ ಯಾವಾಗ ಎಲ್ಲಿ ಗುಡ್ಡ ಕುಸಿಯುತ್ತದೆಯೋ ಎಂಬ ಆತಂಕ ಮನೆಮಾಡಿದೆ.

ಪ್ರತಿ ಮಳೆಗಾಲದಲ್ಲಿ ನೀರು, ಮಣ್ಣಿನ ಚಲನೆಯಿಂದ ಉಬ್ಬಿಕೊಂಡು ಸಂಚಾರಕ್ಕೆ ಸಮಸ್ಯೆಯುಂಟು ಮಾಡುವ ಕರ್ತೋಜಿ ಬಳಿಯ ರಸ್ತೆಯಲ್ಲಿ ಈ ಬಾರಿಯೂ ಅಂತಹದ್ದೇ ಸಮಸ್ಯೆ ಕಾಣಿಸಿಕೊಂಡಿದೆ. ನಿರಂತರ ಮಳೆಯಿಂದ ರಸ್ತೆಯ ಒಂದು ಬದಿ ಉಬ್ಬಿಕೊಂಡಿದ್ದು, ಗುಡ್ಡದ ಮಣ್ಣು ನಿಧಾನವಾಗಿ ರಸ್ತೆಯನ್ನಾವರಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸ್ಥಳದಲ್ಲಿಯೇ ಜೆಸಿಬಿ ಯಂತ್ರವನ್ನು ಕಾಯ್ದಿರಿಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಘಾಟಿ ರಸ್ತೆಯಲ್ಲಿ ಬೇರೆ ಯಾವುದೇ ಘಾಟಿಯಲ್ಲಿ ಕಾಣಿಸದ ಅಪರೂಪದ ಮತ್ತು ವಿಚಿತ್ರ ಸಮಸ್ಯೆಯೊಂದು ಎದುರಾಗುತ್ತಿದ್ದು, ಪ್ರತಿವರ್ಷ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಕರ್ತೋಜಿ ಬಳಿ ಗುಡ್ಡದಿಂದ ಬರುವ ಮಣ್ಣಿನಿಂದ ರಸ್ತೆ ಉಬ್ಬಿಕೊಳ್ಳುತ್ತಿರುವುದು ಈಗ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಕರ್ತೋಜಿಯ ಈ ಸಮಸ್ಯೆಗೆ ಜೆ ಮಾದರಿ ತಡೆಗೋಡೆ ನಿರ್ಮಾಣದಿಂದ ಪರಿಹಾರ ಸಾಧ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದು, ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಮಡಿಕೇರಿ ವಿಭಾಗದಿಂದ ಕೇಂದ್ರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಸಂಪಾಜೆಯಿಂದ ಬೋಯಿಕೇರಿವರೆಗೆ ಒಟ್ಟು 26 ತಡೆಗೋಡೆಗಳನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪೈಕಿ 21 ತಡೆಗೋಡೆಗಳ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ.