ಮಡಿಕೇರಿ : ಜನರ ದಿಕ್ಕು ತಪ್ಪಿಸಲು ಆರ್ಎಸ್ಎಸ್ ವಿರುದ್ಧ ಸರ್ಕಾರದಿಂದ ಗದಪ್ರಹಾರ ನಡೆಯುತ್ತಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘವು ನೂರು ವರ್ಷಗಳಿಂದ ಸಮಾಜಸೇವೆ ಮಾಡಿಕೊಂಡು ಬರುತ್ತಿದ್ದು, ನೂರು ವರ್ಷದ ಆಚರಣೆಯನ್ನು ಎಲ್ಲೆಡೆ ಮಾಡಲಾಗುತ್ತಿದೆ. ಆದರೆ, ಸರ್ಕಾರ ತನ್ನ ವಫಲ್ಯ ಮುಚ್ಚಿಹಾಕಲು ಆರ್ಎಸ್ಎಸ್ ವಿರುದ್ಧ ಈ ಹುನ್ನಾರ ಮಾಡುತ್ತಿದೆ ಎಂದರು.
ಇದನ್ನು ಓದಿ: ಚಿತ್ತಾಪುರದಲ್ಲಿ ಆರ್ ಎಸ್ಎಸ್ ಪಥಸಂಚಲನ ನಡೆಸಲು ಅನುಮತಿ: ಸಚಿವ ಪ್ರಿಯಾಂಕ್ ಖರ್ಗೆ ರಿಯಾಕ್ಷನ್
ಸರ್ಕಾರಿ ಜಾಗ ಬಳಸಲು ಶಿಷ್ಟಾಚಾರ ಇರಲಿ, ಅದು ಸಮಸ್ಯೆ ಅಲ್ಲ. ಸರ್ಕಾರದ ಮಾನದಂಡವನ್ನು ಪಾಲನೆ ಮಾಡಿದರೆ ಅನುಮತಿ ಕೊಡಲೇಬೇಕು ಎಂದ ಸಂಸದರು, ಸರ್ಕಾರಕ್ಕೆ ಒಂದು ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ, ಅದನ್ನು ಮುಚ್ಚಿಹಾಕಲು ಈ ರೀತಿ ಸುದ್ದಿ ಮಾಡುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಪಿಡಿಒ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದರು, ಎಲ್ಲರಿಗೂ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಕಾಂಗ್ರೆಸ್ನವರಿಗೆ ನಮ್ಮ ಸಿದ್ಧಾಂತ ಸರಿ ಇಲ್ಲ ಎಂದ ಮಾತ್ರಕ್ಕೆ ಈ ರೀತಿ ಮಾಡುವುದು ಸರಿಯಲ್ಲ. ತಮ್ಮ ಬಿಡುವಿನ ಸಮಯದಲ್ಲಿ ಅಽಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅಧಿಕಾರಿ ವಿರುದ್ಧ ಕ್ರಮ ಸರಿಯಲ್ಲ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.





